ಬೆಂಗಳೂರು: ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಕುರಿತು ಹೇಳಿಕೆ ನೀಡಿರುವುದು ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ್ದಾರೆ.
ಈ ಕುರಿತು ಅವರ ನಿವಾಸದಲ್ಲಿ ಮಾತನಾಡಿರುವ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.
ಈ ಹಿಂದೆ ಒಬ್ಬ ನಟನ ಕುರಿತು ನಾನು ಹೇಳಿಕೆ ನೀಡಿದೆ. ಆದ್ರೆ ಸಾವಿನ ಬಳಿಕ ಈ ರೀತಿ ಹೇಳಬಾರದು ಎಂದು ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದೇನೆ. ನಮ್ಮಕ್ಕನ ಸಾವು ಸಾವಲ್ಲವೇ, ನಮಗೂ ತಾಯಿ ಇಲ್ಲವೇ, ಅವರು ಕ್ಯಾನ್ಸರ್ ರೋಗಿ, ಅವರಿಗೆ ನೋವಾಗುವುದಿಲ್ಲವೇ, ನಮ್ಮಕ್ಕನನ್ನು ಸಿದ್ಧಾಂತ ದೃಷ್ಟಿಯಿಂದ ಹಲವರು ಒಪ್ಪದಿರಬಹುದು. ಆದರೆ ಒಂದು ಸಾವು ತರುವಷ್ಟೂ ಸಿದ್ಧಾಂತ ಕ್ರೂರಿಯಾ ಎಂದು ಪ್ರಮೋದ್ ಮುತಾಲಿಕ್ ಹೆಸರನ್ನು ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.
ಸಿಸಿಬಿ ಪೊಲೀಸರ ಮೊದಲ ವಿಚಾರಣೆ ವೇಳೆ ಇಂದು ಮತ್ತಷ್ಟು ಸ್ಟೋಟಕ ಮಾಹಿತಿಗಳೊಂದಿಗೆ ಬರುವುದಾಗಿ ಹೇಳಿಕೆ ನೀಡಿದ್ದರು. ಎರಡನೇ ಹಂತದ ವಿಚಾರಣೆಯಲ್ಲಿ ನಟ- ನಟಿಯರ ಡ್ರಗ್ಸ್ ಡೀಲ್ ಸಂಬಂಧ ಟೆಕ್ನಿಕಲ್ ಎವಿಡೆನ್ಸ್ ಸಮೇತ ಹಾಜರಾಗುವುದಾಗಿ ಇಂದ್ರಜಿತ್ ಹೇಳಿದ್ದರು. ಅದರಂತೆ ಇಂದು ಇಂದ್ರಜಿತ್ ಹಾಜರಾಗುತ್ತಿದ್ದಾರೆ.
ಸಾಕ್ಷ್ಯಾಧಾರಗಳನ್ನು ಏನೇನು ಕೊಟ್ಟಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆಗೆ ಸಹಾಯವಾಗಲು ಸಾಕಷ್ಟು ದಾಖಲೆ ಹಾಗೂ ಮಾಹಿತಿಗಳನ್ನು ನೀಡಿದ್ದೇನೆ. ಪೂರಕವಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕಿರುವುದರಿಂದ ಇಂದು ಕರೆದಿದ್ದಾರೆ. ಹೀಗಾಗಿ ಮಾಹಿತಿ ನೀಡಲು, ಸಾಕ್ಷ್ಯಾಧಾರ ನೀಡಲು ತೆರಳುತ್ತಿದ್ದೇನೆ.