ಬೆಂಗಳೂರು, ಮಾ.9: ಕರ್ನಾಟಕದಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎಂಬ ರೇಸ್ಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.
ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಸ್ವಲ್ಪ ಮಂಕಾಗಿದ್ದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಆಸೆಯನ್ನಂತೂ ಬಿಟ್ಟಿಲ್ಲ.
ಈಗಾಗಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯದಲ್ಲಿ ಓಡಾಡುತ್ತಿದ್ದಾರೆ. ಅವರ ಹಿಂಬಾಲಕರು ನಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಈಗ ಆ ಸಾಲಿಗೆ ಹೊಸದೊಂದು ಸೇರ್ಪಡೆಯಾದಂತೆ ಕಾಣಿಸುತ್ತಿದೆ.
ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾಜಿ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ಪದಗ್ರಹಣ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಪ್ರಚಾರ ಸಮಿತಿ ಅಧ್ಯಕ್ಷರಾದ ನಂತರ ನಿಮ್ಮ ಹೆಸರು ಮುಖ್ಯಮಂತ್ರಿ ಅಭ್ಯರ್ಥಿ ರೇಸ್ ನಲ್ಲಿ ಬರುವುದೇ ಎಂಬ ಪ್ರಶ್ನೆಗೆ, ‘ಕೂಸು ಹುಟ್ಟುವ ಮುನ್ನ ಕುಲಾವಿ ಒಲೆದರು ಎನ್ನುವುದಕ್ಕಿಂತ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಸಿಎಂ ಯಾರಾಗುತ್ತಾರೆ ಎಂದು ಹೈಕಮಾಂಡ್ ಘೋಷಣೆ ಮಾಡುತ್ತದೆ’ ಎಂದರು. ಆ ಮೂಲಕ ತಾವು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ನೇರವಾಗಿ ಹೇಳದೆ, ತಾವು ಸಹ ರೇಸ್ನಲ್ಲಿ ಇರುವುದರ ಸಂದೇಶ ನೀಡಿದರು.
ಮಾ.28ರಂದು ಅಧಿಕಾರ ಸ್ವೀಕಾರ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ. ಪಾಟೀಲ್ ಅವರ ಪದಗ್ರಹಣ ಸಮಾರಂಭ ಮಾ.28ರಂದು ಮಧ್ಯಾಹ್ನ 3ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.
‘ಪ್ರಚಾರ ಸಮಿತಿ ಅಧ್ಯಕ್ಷನಾಗಿ ಇದೇ 28ರಂದು ಎಲ್ಲ ನಾಯಕರು, ಶಾಸಕರು, ಮಾಜಿ ಶಾಸಕರು, ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡಿ ನನ್ನ ಕೆಲಸ ಆರಂಭಿಸುತ್ತೇನೆ. ನನ್ನ ಕಾರ್ಯಕ್ರಮದ ಬಗ್ಗೆ ಪದಗ್ರಹಣ ಕಾರ್ಯಕ್ರಮದ ವೇಳೆ ಹೇಳುತ್ತೇನೆ. ಪ್ರಚಾರ ಸಮಿತಿ ಅಧ್ಯಕ್ಷನಾದ ನಂತರ ನಾನು ಪಕ್ಷದ ವರ್ಚಸ್ಸು ಹೆಚ್ಚಿಸಬೇಕಾಗುತ್ತದೆ. ಪ್ರಚಾರ ಸಮಿತಿಯ ಪದಾಧಿಕಾರಿಗಳ ನೇಮಕ ಕುರಿತು ರಾಜ್ಯ ಉಸ್ತುವಾರಿ ಸುರ್ಜೆವಾಲ ಹಾಗೂ ಎಲ್ಲ ನಾಯಕರ ಜತೆ ಚರ್ಚಿಸಿ ಮಾಡುತ್ತೇನೆ’ ಎಂದು ಹೇಳಿದರು.
‘ನಾನು 5 ಬಾರಿ ಶಾಸಕನಾಗಿ, 1 ಬಾರಿ ಸಂಸದನಾಗಿ, 5 ವರ್ಷ ಜಲ ಸಂಪನ್ಮೂಲ ಸಚಿವನಾಗಿ ಹಾಗೂ ಗೃಹ ಸಚಿವನಾಗಿ ಕಾರ್ಯ ನಿರ್ವಹಿಸಿರುವ ಅನುಭವ ಇದ್ದು, ಎಲ್ಲ ನಾಯಕರು, ಕಾರ್ಯಕರ್ತರು ಸಾಕಷ್ಟು ಸಲಹೆ ನೀಡಿದ್ದಾರೆ. ನಾನು ಅಧಿಕಾರ ವಹಿಸಿಕೊಂಡ ನಂತರ ಹಿರಿಯ ನಾಯಕರ ಸಭೆ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿ, ನಂತರ ಯುವ ಮುಖಂಡರು, ಶಾಸಕರ ಅಭಿಪ್ರಾಯ ಪಡೆದು ನಮ್ಮ ಕಾರ್ಯತಂತ್ರ ರೂಪಿಸುತ್ತೇನೆ. ಉಳಿದ ವಿಚಾರವನ್ನು ಪದಗ್ರಹಣ ಕಾರ್ಯಕ್ರಮದಲ್ಲಿ ಹೇಳುತ್ತೇನೆ’ ಎಂದು ಎಂ.ಬಿ. ಪಾಟೀಲ್ ಹೇಳಿದರು.