ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ಹುಟ್ಟುಹಬ್ಬದ ದಿನವೇ ರಿಲೀಸ್ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ‘ಜೇಮ್ಸ್’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈವೆಂಟ್ನಲ್ಲಿ ನಟ, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಅಪ್ಪುನನ್ನು ನೆನೆದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ವೇದಿಕೆ ಮೇಲೆ ಅಪ್ಪುನನ್ನು ನೆನೆದು ಮಾತನಾಡಿದ ಅವರು, ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನ ದೇವರು ನಿಲ್ಲಿಸಿ ಬಿಟ್ಟ. ಆದರೆ ನಾನು ಕುಂಟ್ಕೊಂಡು ಓಡಾಡಿಕೊಂಡು ಇರುತ್ತೇನೆ. ನನ್ನನ್ನು ದೇವರು ಇನ್ನು ಉಳಿಸಿದ್ದಾನೆ. ಈ ಈವೆಂಟ್ ನೋಡುತ್ತಿದ್ರೆ ನಾನು ಏಕೆ ಬದುಕಿದ್ದೇನೆ ಅನಿಸಿತು ಎಂದು ನೋವಿನಲ್ಲಿ ಮಾತನಾಡಿದರು.ನನಗೆ ಹಾರ್ಟ್ ಅಟ್ಯಾಕ್ ಆಗಿ, ಸ್ಟ್ರೋಕ್ ಬಂದ್ರು ದೇವರು ನನ್ನನ್ನು ಬದುಕಿಸಿದ್ದಾನೆ. ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ. ಇಲ್ಲ ಅವನು ಇರುವ ಕಡೆ ನಾನೇ ಹೋಗುತ್ತೇನೆ. ನನಗೆ ಇಲ್ಲಿ ಇರುವುದಕ್ಕೆ ಆಗುತ್ತಿಲ್ಲ. ನಾನು ಬರುತ್ತೇನೆ ಎಂದು ಭಾವನ್ಮಾಕವಾಗಿ ನುಡಿದಿದ್ದಾರೆ. ಈ ಮಾತುಗಳನ್ನು ಕೇಳಿ ಶಿವಣ್ಣ ದುಃಖ ತಡೆಯಲಾಗದೆ ಅಳುತ್ತಿದ್ದಾರೆ.
ಜೇಮ್ಸ್ ತಂಡ ನೋಡಿದರೆ ನನಗೆ ಹೊಟ್ಟೆಕಿಚ್ಚಾಗುತ್ತೆ. ಅವನ ಕೊನೆ 3-4 ತಿಂಗಳು ಅವನ ಜೊತೆಯಲ್ಲೇ ಸಮಯ ಕಳೆದಿದ್ದೀರಿ. ನಾನು ಈ ಟೀಮ್ ನಲ್ಲಿಯೇ ಇದ್ದಿದ್ರೆ ಅವನ ಜೊತೆ ಕೆಲಸ ಮಾಡಬಹುದಿತ್ತು ಎಂದು ಅನಿಸುತ್ತೆ ಎಂದರು.