ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಫಲಿಸದೇ ನಿಧನರಾದ ದೇಶಕಂಡ ಹಿರಿಯ ಗಾಯಕಿ ಲತಾ ಮಂಗೇಶ್ಕರ್, ಅವರನ್ನ ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಳುಹಿಸಿಕೊಡಲಾಯಿತು. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ ದೇಶದ ಗಣ್ಯರು ಅಗಲಿದ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅದರಂತೆ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಬಾಲಿವುಡ್ ಸ್ಟಾರ್, ಶಾರೂಖ್ ಖಾನ್ ವಿನಾಕಾರಣ ಸೋಶಿಯಲ್ ಮೀಡಿಯಾದಲ್ಲಿ ಗುರುತರ ಆರೋಪಗಳಿಗೆ ಒಳಗಾಗಿದ್ದಾರೆ.
ಇದು ಸೋಶಿಯಲ್ ಮಿಡಿಯಾ ಯುಗ.. ಅದ್ರಲ್ಲೂ ಅತ್ಯಂತ ಪೊಲರೈಜ್ ಆಗಿರೋ ಮನಸ್ಥಿತಿಗಳು.. ಯಾವುದೋ ಒಂದು ಫೋಟೋ.. ಯಾವುದೋ ಕೆಲ ಸೆಕೆಂಡಿನ ವಿಡಿಯೋಗಳು ಸತ್ಯವನ್ನೂ ಮರೆಮಾಚಿ.. ಸುಳ್ಳನ್ನೇ ಸತ್ಯವೆಂದು ನಂಬಿಸಿ ಬಿಡುವ ಭಯಂಕರ ವಿಷಾವೃತ್ತ.. ಇಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ವಾಸ್ತವವಾದ್ರೂ ಏನು? ಎಂದು ತಿಳಿಯೋ ವ್ಯವಧಾನವೂ ಇಲ್ಲ.. ಎಲ್ಲವನ್ನೂ ಪ್ರಮಾಣಿಸಿ ನೋಡುವಷ್ಟು ತಾಳ್ಮೆಯೂ ಇಲ್ಲ.. ಇಲ್ಲಿ ತಮಗನಿಸಿದ್ದೇ ಸರಿ.. ಇಂಥ ಸ್ಥಿತಿಗಳ ನಡುವೆ.. ವಿವಾದಕ್ಕೆ ಕಾರಣಬೇಕಾ? ಅಂಥದ್ದೊಂದು ವಿವಾದಕ್ಕೆ ಸದ್ಯ ಶಾರೂಖ್ ಖಾನ್ ಒಳಗಾಗಿದ್ದಾರೆ.
ವಾಸ್ತವವಾಗಿ, ಶಾರುಖ್ ಖಾನ್ ಅವರು ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮುಂದೆ ಫಾತಿಹಃ ಓದಿದರು. ಬಳಿಕ ಮಾಸ್ಕ್ ತೆಗೆದು ಗಾಳಿಯನ್ನ ಊದಿ ಪ್ರಾರ್ಥಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಊದಿದ್ದನ್ನು ‘ಉಗುಳಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಬಿಜೆಪಿ ನಾಯಕ ಅರುಣ್ ಯಾದವ್ ಟ್ವೀಟ್ ಮಾಡಿ, ಏನು ಅವರು ಉಗುಳಿದ್ರಾ? ಎಂದು ಪ್ರಶ್ನೆ ಮಾಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.