ಗದಗ: ‘ನರಗುಂದದಲ್ಲಿ ನಡೆದ ಹತ್ಯೆ ಘಟನೆ ಆಕಸ್ಮಿಕ. ಕೆಲವು ಮುಸ್ಲಿಂ ಕಿಡಿಗೇಡಿಗಳು ಹಿಂದೂ ದೇವರನ್ನು ಅವಮಾನಿಸುವುದು, ಹಿಂದೂ ಯುವತಿಯರನ್ನು ಚುಡಾಯಿಸುವುದು, ಲವ್ ಜಿಹಾದ್ನಲ್ಲಿ ತೊಡಗಿಕೊಳ್ಳುವುದು, ಆಕಳು ಕಳ್ಳತನವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.
ಇವುಗಳನ್ನು ನಿಲ್ಲಿಸಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ನರಗುಂದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳನ್ನು ಶನಿವಾರ ಬೆಟಗೇರಿಯಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿ ಬಳಿಕ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
‘ಹೊಡೆದಾಟದಲ್ಲಿ ಆಕಸ್ಮಿಕವಾಗಿ ಕೊಲೆಯಾಗಿದೆ. ಅದು ಆಗಬಾರದಿತ್ತು. ಈಗಾಗಲೇ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿದ್ದಾರೆ. ಇನ್ನು ಮುಂದೆ ಯಾರನ್ನಾದರೂ ಬಂಧಿಸಿದರೆ ನರಗುಂದ ಹೊತ್ತಿ ಉರಿಯುತ್ತದೆ’ ಎಂದು ಅವರು ಎಚ್ಚರಿಸಿದರು.