ಬೆಂಗಳೂರು: 2023ರ ಚುನಾವಣೆ ರಾಜ್ಯದಲ್ಲಿ ಹೊಸ ಪಕ್ಷಗಳ ಉದಯಕ್ಕೆ ನಾಂದಿ ಆಗುತ್ತಾ? 2013ರ ಘಟನೆಗಳು ಮರುಕಳಿಸುವ ಸೂಚನೆಗಳು ಸಿಗ್ತಿವೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ರಚನೆ ಬಗ್ಗೆ ಚರ್ಚೆ ಆಗಿದೆ ಅನ್ನೋ ಸುದ್ದಿ ಹಬ್ಬಿದೆ.
2023ರ ಚುನಾವಣೆಗೆ ಹೊಸ ರಂಗು ಪಡೆಯಲಿದೆ.
ರಾಜ್ಯದಲ್ಲಿ ಹೊಸ ಪಕ್ಷ ಉದಯವಾಗುವ ಬಗ್ಗೆ ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿದೆ. ಸಾಹುಕಾರ್ ಮನೆಯಲ್ಲಿ ಹೊಸ ಪಕ್ಷ ಕಟ್ಟುವ ಚರ್ಚೆ ನಡೆದಿದೆ. ಯತ್ನಾಳ್ ಜೊತೆ ಸೇರಿ ಜಾರಕಿಹೊಳಿ ಹೊಸ ಅಧ್ಯಾಯ ಬರೀತಾರಾ ಅನ್ನೋ ಪ್ರಶ್ನೆ ಮೂಡಿದೆ.
ರಾಜ್ಯದಲ್ಲಿ ಉದಯವಾಗುತ್ತಾ ಪ್ರಾದೇಶಿಕ ಪಕ್ಷ!
ಹೌದು, ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಇಂತಹದೊಂದು ಗುಸುಗುಸು ಶುರುವಾಗಿದೆ. ರಮೇಶ್ ಜಾರಕಿಹೊಳಿ, ಯತ್ನಾಳ್ ಮಧ್ಯೆ ಹೊಸ ಪಕ್ಷದ ಬಗ್ಗೆ ಚರ್ಚೆ ಆಗಿದೆ ಅನ್ನೋ ಸುದ್ದಿ ಸದ್ದಾಗ್ತಿದೆ. ಸಮಾನ ಮನಸ್ಕರ ಜೊತೆ ಸೇರಿ ಯತ್ನಾಳ್ ತಮ್ಮದೇ ಹೊಸ ಪಕ್ಷ ಸ್ಥಾಪನೆಗೆ ತಯಾರಿ ಮಾಡ್ತಿದ್ದಾರೆ ಅಂತ ಗುಲ್ಲೆದ್ದಿದೆ.
ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯದಲ್ಲಿ ಹೊಸ ಪಕ್ಷ ಉದಯಕ್ಕೆ ರೆಕ್ಕೆಪುಕ್ಕಗಳು ಬಂದಿವೆ. ಮಾಜಿ ಸಚಿವರ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸೀಕ್ರೆಟ್ ಸಭೆ ನಡೆದಿದೆ. ಮೀಟಿಂಗ್ನಲ್ಲಿ ಭಾಗವಹಿಸಿದ ಒಬ್ಬರಿಂದ ನ್ಯೂಸ್ ಫಸ್ಟ್ಗೆ ಮಾಹಿತಿ ಲಭ್ಯವಾಗಿದ್ದು, ಹೊಸ ಪಕ್ಷ ರಚಿಸಿದ್ರೆ ಹೇಗೆ ಎಂಬ ಪ್ರಸ್ತಾಪವನ್ನ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಸಮಾನ ಮನಸ್ಕರ ಜೊತೆ ಸೇರಿ ಹೊಸ ಪಕ್ಷ ರಚನೆ ಬಗ್ಗೆ ಯತ್ನಾಳ್ ಚರ್ಚೆ ಮಾಡಿದ್ದಾರಂತೆ. ಮೊನ್ನೆ ಸಭೆಯಲ್ಲಿ ಜಾರಕಿಹೊಳಿ, ಯತ್ನಾಳ್, ಮಹೇಶ್ ಕುಮಟಳ್ಳಿ ಸೇರಿ ಹಲವು ನಾಯಕರಿದ್ದರು.
ಯತ್ನಾಳ್-ಸಾಹುಕಾರ್ ತೆರೆಮರೆ ತಂತ್ರ!
ಉತ್ತರ ಕರ್ನಾಟಕ ಭಾಗದಲ್ಲಿ ನಿಮಗೆ ಸಾಕಷ್ಟು ವರ್ಚಸ್ಸಿದೆ. ಬೆಳಗಾವಿ, ವಿಜಯಪುರದಲ್ಲಿ ಪ್ರಬಲ ಸಮುದಾಯದ ಮತಗಳಿವೆ. ಮೀಸಲಾತಿ ವಿಚಾರದಲ್ಲಿ ಎಲ್ಲ ಸಮುದಾಯದ ಪರ ಧ್ವನಿ ಎತ್ತಿದ್ದೇನೆ. ಸದನದಲ್ಲಿ ಪಂಚಮಸಾಲಿ ಪರ ಮಾತ್ರ ಹೋರಾಟ ಮಾಡಿಲ್ಲ ಅಂತ ಹೇಳಿರುವ ಯತ್ನಾಳ್, ಎಲ್ಲ ಸಮುದಾಯದ ಬೆಂಬಲ ಪಡೆದು ಪಕ್ಷ ರಚಿಸಿದ್ರೆ ಹೇಗೆ ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ. ಪಕ್ಷ ರಚಿಸಿದ್ರೆ, 20-30 ಸೀಟು ಗೆಲ್ಲಬಹುದು ಎಂಬ ಲೆಕ್ಕಾಚಾರ ಇಬ್ಬರು ನಾಯಕರು ಹಾಕಿದ್ದಾರಂತೆ. ಅಲ್ಲದೆ, ‘ಕೈ-ತೆನೆ’ ಜೊತೆಗೆ ಟಿಕೆಟ್ ಹೊಂದಾಣಿಕೆ ಮಾಡಬಹುದು ಅಂತ ಹೇಳಿರುವ ಯತ್ನಾಳ್, ಬಿಜೆಪಿ ಮರಳಿ ಅಧಿಕಾರಕ್ಕೆ ಬರೋದು ಅನುಮಾನ ಇದೆ ಅಂತ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಯತ್ನಾಳ್ ಪ್ರಸ್ತಾಪದ ವಿಷಯದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಸಾಧಕ, ಬಾಧಕದ ಕುರಿತು ಸಮಾಲೋಚನೆ ನಡೆದಿದೆ.. ಹಾಗೇನಾದರೂ ಹೊಸ ಪಕ್ಷ ಉದಯವಾಗಿದ್ದೇ ಆದಲ್ಲಿ ಯಾರಿಗೆ ನಷ್ಟ.. ಯಾರಿಗೆ ಕಷ್ಟ ಅನ್ನೋ ಚರ್ಚೆಗಳು ಗರಿಗೆದರಿವೆ.. ಅಷ್ಟಕ್ಕೂ ಪ್ರಾದೇಶಿಕ ಪಕ್ಷ ಹುಟ್ಟುಹಾಕಿ ಕೈಸುಟ್ಟುಕೊಂಡ ಉದಾಹರಣೆಗಳು ಕರ್ನಾಟಕದಲ್ಲಿ ಸಾಕಷ್ಟು ಇರುವಾಗ ಈ ಸಾಹಸಕ್ಕೆ ಯತ್ನಾಳ್ ಕೈಹಾಕ್ತಾರಾ ಅನ್ನೋದು ಸದ್ಯಕ್ಕೆ ಕಾಡ್ತಿರುವ ಪ್ರಶ್ನೆ.