ಜಗಳೂರು: ‘ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ…’
ತಾಲ್ಲೂಕಿನ ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಶುಕ್ರವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಜೀವ್ ಅವರ ತಾಯಿ ಪಟ್ಟಣದ ಆಸ್ಪತ್ರೆಯಲ್ಲಿ ರೋದಿಸಿದ್ದು ಹೀಗೆ.
ಪಟ್ಟಣದ ಶವಾಗಾರದಲ್ಲಿ ಹೆತ್ತ ಮಕ್ಕಳು ಶವವಾಗಿ ಸಾಲಾಗಿ ಮಲಗಿರುವ ಘೋರ ದೃಶ್ಯ ಕಂಡು ಹೆತ್ತವರು ಆಘಾತಕ್ಕೆ ಒಳಗಾದರು. ಸಂಜೀವ್ ಅವರ ತಾಯಿ ಗೋಗರೆಯುತ್ತಿದ್ದ ದೃಶ್ಯ ಕರಳು ಕಿತ್ತು ಬರುವಂತಿತ್ತು.
‘ಬೆಂಗಳೂರಿನಲ್ಲಿ ಮಗ ಸಂಜು ಕೂಲಿ ಕೆಲಸಕ್ಕೆ ಹೋದವ ನಂತರ ‘ಉಬರ್’ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ. ತಾನು ದುಡಿದ ಹಣವನ್ನು ಕಷ್ಟಪಟ್ಟು ಉಳಿಸಿ ಮನೆಗೆ ಕಳುಹಿಸುತ್ತಿದ್ದ. ಅವನೇ ತನ್ನ ಕಾರಿನಲ್ಲಿ ಸ್ನೇಹಿತರನ್ನು ಕರೆದುಕೊಂಡು ಬರುತ್ತಿದ್ದ. ಮಗ ಕೊನೆಗೂ ಮನೆಗೆ ಬರಲೇ ಇಲ್ಲ’ ಎಂದು ಸಂಜೀವ್ ಅವರ ತಂದೆ ನೋವಿನಿಂದ ಹೇಳಿದರು. ಮಧ್ಯಾಹ್ನದ ನಂತರ ಶವಾಗಾರದತ್ತ ಧಾವಿಸಿದ ಮೃತರ ಸಂಬಂಧಿಕರ ಗೋಳು ಮುಗಿಲುಮುಟ್ಟಿತ್ತು.
ಹೊಟ್ಟೆಪಾಡಿಗಾಗಿ ದೂರದ ಬೆಂಗಳೂರು ನಗರಕ್ಕೆ ವಲಸೆ ಹೋಗಿದ್ದ ಹದಿಹರೆಯದ ಏಳು ಯುವಕರು ಮಕರ ಸಂಕ್ರಾಂತಿ ಹಬ್ಬಕ್ಕೆ ತಮ್ಮೂರಿಗೆ ಮರಳಿ ಕುಟುಂಬದ ಸದಸ್ಯರೊಡನೆ ಸಂಭ್ರಮಿಸುವ ಕನಸು ಕೊನೆಗೂ ಈಡೇರಲೇ ಇಲ್ಲ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಹೋಗಿ ಮೈಮುರಿದು ದುಡಿದು ಕುಟುಂಬವನ್ನು ಸಲಹುತ್ತಿದ್ದ ಎಳೆಯ ಜೀವಗಳು ಮರಳಿ ಮನೆ ತಲುಪುವ ಮುನ್ನವೇ ಭೀಕರ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿವೆ.