ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ದೌಡಾಯಿಸಿದ್ದ ಕಾವಿಧಾರಿಗಳಿಬ್ಬರ ಬೇಡಿಕೆ ಕೇಳಿ ಗೃಹ ಸಚಿವ ಆರಗ ಜ್ಞಾನೇಂದ್ರ ತಬ್ಬಿಬ್ಬಾದ ಪ್ರಸಂಗವಿದು.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಗೃಹ ಸಚಿವರ ಕೊಠಡಿಗೆ ಧಾವಿಸಿದ ಸ್ವಾಮೀಜಿಗಳಿಬ್ಬರು ಲಿಖಿತ ಮನವಿಯೊಂದನ್ನು ಸಲ್ಲಿಸಿ, ತಮ್ಮ ಕಾರುಗಳಿಗೆ ಸೈರನ್ ಬೇಕೆಂಬ ಬೇಡಿಕೆಯಿಟ್ಟರು ಎಂದು ಮೂಲಗಳು ತಿಳಿಸಿವೆ.
ಸ್ವಾಮೀಜಿಗಳಿಬ್ಬರ ಬೇಡಿಕೆ ಕೇಳಿ ಅಚ್ಚರಿಗೊಂಡ ಸಚಿವರು, ನನ್ನ ಕಾರಿಗೇ ಸೈರನ್ ಇಲ್ಲ. ನಿಮ್ಮ ಕಾರರಿಗೆ ಏಕೆ ಬೇಕು ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಮಾರ್ಗಮಧ್ಯೆ ಸಂಚಾರ ದಟ್ಟಣೆಯಿಂದ ಸಕಾಲದಲ್ಲಿ ನಿಗದಿತ ಸ್ಥಳಕ್ಕೆ ತಲುಪಲಾಗದು. ಪದೇಪದೆ ಈ ಸಮಸ್ಯೆ ಅನುಭವಿಸುತ್ತಿದ್ದು, ಕಾರಿಗೆ ಸೈರನ್ ಅಳವಡಿಸಿದರೆ ಅನುಕೂಲವಾಗಲಿದೆ ಎಂದು ಸ್ವಾಮೀಜಿಗಳಿಬ್ಬರೂ ವಿವರಿಸಿದ್ದಾರೆ. ಸೈರನ್ ಬೇಡಿಕೆಯನ್ನು ನಿರಾಕರಿಸಲಾಗದೆ, ಒಪ್ಪಿಕೊಳ್ಳಲೂ ಆಗದ ಆರಗ, ‘ಆಯಿತು ಪರಿಶೀಲಿಸಿ ಕ್ರಮಕೈಗೊಳ್ಳುವೆ’ ಎಂಬ ಭರವಸೆ ನೀಡಿ ಅವರನ್ನು ಸಾಗಹಾಕಿದರು ಎಂದು ಮೂಲಗಳು ಮಾಹಿತಿ ನೀಡಿವೆ.