ಬೆಂಗಳೂರು: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಬೆಂಗಳೂರು ಮಹಾನಗರ ವಿಧಾನ ಪರಿಷತ್ ನ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಶರೀಫ್ ಬಾಬು (ಕೆಜಿಎಫ್ ಬಾಬು) ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯೂಸುಫ್ ಶರೀಫ್ ಬಾಬು ಅವರು, ತನ್ನನ್ನು ಗೆಲ್ಲಿಸಿದರೆ ರೂ.
5,000, ರೂ.10 ಸಾವಿರ, 50 ಸಾವಿರ, ಒಂದು ಲಕ್ಷ ಜೀವಿವಿಮೆ ಲೆಕ್ಕದಲ್ಲಿ ತಲಾ ರೂ. 5 ಲಕ್ಷ -ಹೀಗೆ ರೂ. 500 ಕೋಟಿಗೂ ಅಧಿಕ ಹಣವನ್ನು ನಿಮಗೆ ಕೊಡುತ್ತೇನೆ ಎಂದು ಮತದಾರಿಗೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಈ ರೀತಿ ತಿಳಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಯಲಹಂಕದ ತಹಶೀಲ್ದಾರ್ ಅವರ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ.
ಅತ್ತಿಬೆಲೆ ಠಾಣೆಯಲ್ಲಿ ಕೂಡ ಇನ್ನೊಂದು ಎಫ್ಐಆರ್ ದಾಖಲಾಗಿದ್ದು, ಕ್ಷೇತ್ರದ ಜನರ ಸಂಕಷ್ಟಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ 500 ಕೋಟಿ ಹಣವನ್ನು ನೀಡುವುದಾಗಿ ಯೂಸುಫ್ ಶರೀಫ್ ಬಾಬು ಅವರು ಮಾಧ್ಯಮ ಪ್ರತಿನಿಧಿಗಳ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಎಫ್ಐಆರ್ ದಾಖಲಾಗಿದೆ.