ಬೆಂಗಳೂರು,ಆ.20-ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದ್ದ ವಿಧಾನಮಂಡಲದ ಮಳೆಗಾಲದ ಅವೇಶನ ಸೆಪ್ಟೆಂಬರ್ 21ರಿಂದ ಹತ್ತು ದಿನಗಳ ಕಾಲ ಬೆಂಗಳೂರುನಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸೆಪ್ಟೆಂಬರ್ 21ರಿಂದ 30ರವರೆಗೆ ಕಾಲ ಅವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ.
ಈ ಹಿಂದೆ ಜೂನ್ ತಿಂಗಳಿನಲ್ಲಿ ಮಳೆಗಾಲದ ಅವೇಶನ ನಡೆಸಬೇಕಾಗಿತ್ತಾದರೂ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ವಿಧಾನಸೌಧ ಹೊರತುಪಡಿಸಿ ನಗರದ ಅರಮನೆ ಮೈದಾನ ಸೇರಿದಂತೆ ಮತ್ತಿತರ ಕಡೆ ಸಭೆ ನಡೆಸಲು ಸ್ಥಳ ಗುರುತಿಸುವ ಕಾರ್ಯ ನಡೆಸಲಾಗಿತ್ತು.
ಅಂತಿಮವಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ವಿಧಾನಸೌಧದಲ್ಲಿ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.