ಪತ್ನಿಯನ್ನು ಕೊಲೆ ಮಾಡಿ ಅನುಮಾನ ಬಾರದರಿಲಿ ಎಂದು ವಿಷ ಸೇವಿಸಿ ಡ್ರಾಮಾ ಮಾಡಿದ್ದ ಗಂಡನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಹೊರ ಬಂದ ಪತಿಯನ್ನು ಪೊಲೀಸರು ಬಲೆ ಹಾಕಿದ್ದಾರೆ.
ಸಂಧ್ಯಾ ಪತಿಯಿಂದಲೇ ಕೊಲೆಯಾದ ಮಹಿಳೆ. ಒಂದೂವರೆ ವರ್ಷದ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಸಂಧ್ಯಾ ಮಳವಳ್ಳಿ ತಾಲೂಕಿನ ಕುಂದದೂರು ಗ್ರಾಮದ ತವರು ಮನೆ ಸೇರಿದ್ದರು. ತವರು ಮನೆಯಲ್ಲಿದ್ದುಕೊಂಡೇ ಸಂಧ್ಯಾ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಆದ್ರೆ ಒಂದು ದಿನ ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ಮನೆಗೆ ಹಿಂದಿರುಗಿರಲಿಲ್ಲ.
ಮಗಳು ಮನೆಗೆ ಬಾರದ ಹಿನ್ನೆಲೆ ಪೋಷಕರು ಪರಿಚಯಸ್ಥರ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೆ ಆತಂಕಗೊಂಡು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ಸಹ ದಾಖಲಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಸಂಧ್ಯಾ ಶವ ಕುಂದದೂರು ಗ್ರಾಮದ ನಾಲೆಯಲ್ಲಿ ಪತ್ತೆಯಾಗಿತ್ತು. ಇತ್ತ ನೊಂದ ಪತಿಯಂತೆ ನಟಿಸಿ ವಿಷ ಸೇವಿಸಿದ್ದ ಷಡಕ್ಷರಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ಆದ್ರೆ ಪೊಲೀಸರಿಗೆ ಷಡಕ್ಷರಿಯ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು.
ವಾರದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರ ಬಂದ ಷಡಕ್ಷರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಿಚ್ಚಿಟ್ಟಿದ್ದಾನೆ. ಕಂಪ್ಯೂಟರ್ ಕ್ಲಾಸ್ ನಿಂದ ಹಿಂದಿರುಗಿ ಬರುತ್ತಿದ್ದ ಪತ್ನಿಯನ್ನು ನಾಲೆಯಲ್ಲಿ ಮುಳುಗಿಸಿ ಕೊಲೆಗೈದಿರೋದನ್ನ ಒಪ್ಪಿಕೊಂಡಿದ್ದಾನೆ.