ವಿಧಿ ಇನ್ನೊಂದು 10 ನಿಮಿಷ ಕೊಟ್ಟಿದ್ದರೆ ಪುನೀತ್ ರಾಜ್ ಕುಮಾರ್ ಉಳಿದುಕೊಳ್ಳುತ್ತಿದ್ದ. ದಿಢೀರ್ ಹೀಗೆ ಆದಾಗ ಕೊನೆ ಕ್ಷಣದಲ್ಲಿ ಏನು ಮಾಡಬೇಕು ಎಂದು ತೋಚುವುದಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಪುತ್ರ ತೆಲುಗು ಸ್ಟಾರ್ ನಟ ರಾಮ್ ಚರಣ್ ಬೆಂಗಳೂರಿಗೆ ಆಗಮಿಸಿ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ದುಃಖ ಹಂಚಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಗಣ್ಯರು ನಮ್ಮನ್ನು ಭೇಟಿ ಮಾಡಿ ತಮ್ಮ ದುಃಖ ಹಂಚಿಕೊಳ್ಳುತ್ತಿದ್ದಾರೆ ಎಂದರು.
ರಜನಿಕಾಂತ್ ಮತ್ತು ಅವರ ಪತ್ನಿ, ಪುತ್ರ ಕರೆ ಮಾಡಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಅವರು ಕೂಡ ದುಃಖದಲ್ಲಿದ್ದಾರೆ. ನಮಗೆ ಕೂಡ ಅವನನ್ನು ದುಃಖ ಮರೆಯಲು ಆಗುತ್ತಿಲ್ಲ. ಎಂದು ಶಿವರಾಜ್ ಕುಮಾರ್ ಹೇಳಿದರು.
ಪುನೀತ್ ನನ್ನ ಜೊತೆ ಹಿಂದಿನ ದಿನ ಡ್ಯಾನ್ಸ್ ಮಾಡಿದ್ದ. ತುಂಬಾ ಸುಸ್ತಾಗಿದ್ದ. ಆಮೇಲೆ ಗೊತ್ತಾಗಿದ್ದು ಸ್ಕ್ಯಾನಿಂಗ್ ಮಾಡಿಸಿಕೊಂಡು ಬಂದಿದ್ದ ಅಂತ. ಯಾವುದೇ ಸೂಚನೆ ಇರಲಿಲ್ಲ. ಫಿಟ್ ಆಗಿರುವ ವ್ಯಕ್ತಿಗೆ ಹೀಗೆ ಆದರೆ ಬೇರೆಯವರಿಗೂ ಅನುಮಾನ ಬರುವುದು ಸಹಜ ಎಂದು ಅವರು ಹೇಳಿದರು.