ಮಂಡ್ಯ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ಕೋಟ್ಯಾಂತರ ಅಭಿಮಾನಿಗಳಿಗೆ ನೋವು ತರಿಸಿದೆ.
ಕನ್ನಡ ಚಿತ್ರರಂಗಕ್ಕೆ ಅಪ್ಪು ಮರಣ ತುಂಬಲಾರದ ನಷ್ಟ. ಇನ್ನು ಪುನೀತ್ ಹಠಾತ್ ನಿಧನದಿಂದ ಕೆಲ ಅಭಿಮಾನಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯದಲ್ಲಿ ಇದೀಗ ಮತ್ತೊಬ್ಬ ಅಭಿಮಾನಿ ಪುನೀತ್ ನಿಧನದ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಕೆಎಂ ರಾಜೇಶ್ (50) ಎಂಬುವವರು ಸಾವನ್ನಪ್ಪಿದ್ದಾರೆ.
ಅಭಿಮಾನಿ ರಾಜೇಶ್ ಪುನೀತ್ ನಿಧನದ ಬಳಿಕ ಸರಿಯಾಗಿ ಊಟ ಸೇವಿಸದೇ ಅಸ್ವಸ್ಥರಾಗಿದ್ದರು. ನಿನ್ನೆ (ಅ.30) ಅಂತಿಮ ದರ್ಶನಕ್ಕೆ ಹೋಗುವುದಾಗಿ ರಾಜೇಶ್ ಮನೆ ಬಿಟ್ಟಿದ್ದರು. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಸುಸ್ತಾಗಿ ಬೀದ್ದಿದ್ದರು. ಸಂಜೆ ಪರಿಚಯಸ್ಥರು ನೋಡಿ ಮನೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕುಟುಂಬಸ್ಥರು ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ರಾಜೇಶ್ ಮೃತಪಟ್ಟಿದ್ದಾರೆ.
ರಾಜೇಶ್ ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದರು. ಡಾ.ರಾಜ್ಕುಮಾರ್ ಎಂದು ಹೆಸರಿಟ್ಟು ಹೋಟೆಲ್ ನಡೆಸುತ್ತಿದ್ದರು. ಆದರೆ ಪುನೀತ್ ಸಾವಿನ ಸುದ್ಧಿ ಕೇಳಿ ಅಸ್ವಸ್ಥರಾಗಿದ್ದ ಅಭಿಮಾನಿ ಮೃತಪಟ್ಟಿದ್ದಾರೆ. ಆ ಮೂಲಕ ಮಂಡ್ಯದಲ್ಲಿ ಅಭಿಮಾನಿಗಳ ಸಾವಿನ ಸಂಖ್ಯೆ ಎರಡಕ್ಕೇರಿದೆ. ನಿನ್ನೆ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ವೈಎಸ್ ಸುರೇಶ್ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದರು.