ವಿಜಯಪುರ : ಬಿಜೆಪಿ ನಾಯಕರು ಹಣ ಹಂಚಿಕೆ ಎಂದು ಜಮೀರ್ ಅಹ್ಮದ್ ತಮ್ಮ ಪಕ್ಷದ ಭಾವನೆಯನ್ನು ಹೊರಹಾಕಿದ್ದಾರೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕುಟುಕಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಮೀರ್ ಅವರು ಮೊದಲಿನಿಂದ ಅದೇ ಕರಾಮತ್ತು ಮಾಡಿಕೊಂಡು ಬಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಅವರು ನಿನ್ನೆ 13 ಕಡೆಗಳಲ್ಲಿ ಪ್ರಚಾರ ಸಭೆಗಳನ್ನು ಮಾಡಿದ್ದಾರೆ. ಹಳ್ಳಿಗಳಲ್ಲಿ ಬಿಜೆಪಿ ಪರ ದೊಡ್ಡ ಪ್ರಮಾಣದ ಅಲೆ ಸುನಾಮಿ ರೀತಿಯಲ್ಲಿ ಕಂಡು ಬಂದಿದ್ದು, ಬಿಜೆಪಿ ಗೆಲುವು ನಿಶ್ಚಿತ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಸಿಂದಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭೂಸನೂರ 20 ಸಾವಿರ ಮತಗಳ ಅಂತರದಿದ ಗೆಲುವು ಸಾಧಿಸಲಿದ್ದಾರೆ ಎಂದರು.
ಕುಮಾರಸ್ವಾಮಿ ಆರ್.ಎಸ್. ಎಸ್ ಚಡ್ಡಿ ಹಾಕಿದಾರಾ ನೋಡಬೇಕು ಎಂಬ ಜಮೀರ್ ವ್ಯಂಗ್ಯವಾಡಿದ್ದು, ಕುಮಾರಸ್ವಾಮಿ ಅವರೇ ಉತ್ತರ ಹೇಳಬೇಕು ಎಂದರು.
ವಿಧಾನಸೌಧಕ್ಕೆ ಬೀಗಹಾಕಿ ಪ್ರಚಾರ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಮಾಡಿರಬೇಕು, ಆದರೆ ನಮ್ಮ ಸರ್ಕಾರದಲ್ಲಿ ಸಚಿವರು ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲು ಬಂದಿದ್ದಾರೆ ಎಂದರು.
ಕಂಬಳಿ ಹಾಕೋಕೆ ಯೋಗ್ಯತೆ ಬೇಕು ಎಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರೇನು ಕುರಿ ಕಾದಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾನೂ ಹೊಲಕ್ಕೆ ಹೋಗಿದಿನಿ, ಒಕ್ಕಲುತನ ಮಾಡಿದಿನಿ, ಕುರಿ ಸಾಕಿದ್ದೀನಿ, ಕಾದಿದ್ದೀನಿ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದಾರೆ ಎಂದರು.
ಕಂಬಳಿ ಹಾಕುವವರಿಗೆ ಯೋಗ್ಯತೆ ಇರಬೇಕು ಎಂದಿರುವುದ ಹಿಂದಿರುವ ಮೂಲ ಅರ್ಥ ಪರಿಶ್ರಮ ಇರಬೇಕು ಎಂದಷ್ಟೇ ಎಂದು ಸವದಿ ಸಮಜಾಯಿಷಿ ನೀಡಿದರು.