ವಿಜಯಪುರ: ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡಗು, ಒಂದೆರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದ್ದು, ಅಲ್ಲಿ ಕೂಡ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಜಾಬ್ ನಲ್ಲಿ ಒಬ್ಬ ಸಿಧು ಹಾಗೂ ರಾಜ್ಯದಲ್ಲಿ ಒಬ್ಬ ಸಿದ್ದು ಇದ್ದಾರೆ. ರಾಜ್ಯದ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯದ ಫೈಟ್ ನಿಂದಾಗಿ ರಾಜ್ಯದಲ್ಲಿ ಸಹಿತ ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ ಎಂದರು.
ಐದು ವರ್ಷ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ತಾವೇ ಸೋಲನ್ನು ಅನುಭವಿಸಿದರು. 2023 ಹಾಗೂ 2024 ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರಿಗೆ ಭಯವಾಗಿದೆ. ಅವರು ಸೋಲುವುದು ನಿಶ್ಚಿತ ಎಂಬುದು ಅವರಿಗೆ ಗೊತ್ತಾಗಿದೆ. ಸೋಲಿಗೆ ಕಾರಣ ಕೊಡಲು ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಹಣ, ಹೆಂಡ ಹಂಚುವಂತದ್ದು ಕಾಂಗ್ರೆಸ್ನವರು. ಹಣ ಹಂಚುವುದು ಗಮನಕ್ಕೆ ಬಂದರೆ ಚುನಾವಣಾ ಆಯೋಗಕ್ಕೆ ಕಂಪ್ಲೇಟ್ ಮಾಡಬೇಕು ಎಂದರು.
ಅಲ್ಪಸಂಖ್ಯಾತರ ಒಲವು ಸಹಿತ ಬಿಜೆಪಿಯತ್ತ ಹೆಚ್ಚಾಗಿದೆ. ಎರಡು ಮತಕ್ಷೇತ್ರದಲ್ಲಿ ಬಿಜೆಪಿ ಅಬ್ಯರ್ಥಿಗಳ ಗೆಲವು ಖಚಿತ ಎಂದರು. ಸಿಂದಗಿ ಉಪಚುನಾವಣೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಎರಡು ದಿನಗಳ ಕಾಲ ಯಡಿಯೂರಪ್ಪನವರು ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ವಿ. ಸೋಮಣ್ಣ ಸೇರಿದಂತೆ ಹಲವು ಜನ ಸಚಿವರು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇಲ್ಲಿನ ವಾತಾವರಣ ನೋಡಿದರೆ, ಪ್ರಧಾನಿ ಮೋದಿ ಅವರ ಕಾರ್ಯಕ್ರಮ ರಾಜ್ಯ ಸರ್ಕಾರದ ಕಾರ್ಯಕ್ರಮದಿಂದಾಗಿ ಜನರ ಒಲವು ಬಿಜೆಪಿ ಯತ್ತ ಇರುವುದು ಸ್ಪಷ್ಟವಾಗುತ್ತಿದೆ ಎಂದರು.
ಇಲ್ಲಿನ ಜನರ ಬೆಂಬಲ ನೋಡಿದರೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 20 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಬರುವುದು ಖಚಿತ. ಅದೇ ತರಹ ಹಾನಗಲ್ನಲ್ಲೂ ಸಹಿತ ನಮ್ಮ ಅಬ್ಯರ್ಥಿ ಗೆದ್ದು ಬರುವ ವಿಶ್ವಾಸವಿದೆ. ಮುಖ್ಯವಾಗಿ ದೇಶದ ಪ್ರಧಾನಿ ಅವರಿಗೆ ನಾಯಕತ್ವ ಸಿಕ್ಕ ಮೇಲೆ 7 ವರ್ಷದಲ್ಲಿ ಭಾರತದ ಸ್ವಾಭಿಮಾನ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.
ಪ್ರಮುಖವಾಗಿ ಕಿಸಾನ್ ಸಮ್ಮಾನ ಯೋಜನೆಯಿಂದ ರೈತರಿಗೆ ಸಾಕಷ್ಟು ಸಹಾಯಕಾರಿಯಾಗಿದೆ. ಡಿಪಾಸಿಟ್ ಇಲ್ಲದೇ ಅಕೌಂಟ್ ತೆಗೆಯುವ ವ್ಯವಸ್ಥೆ ಮಾಡಿದ್ದು ಪ್ರಧಾನಿ ಮೋದಿಯವರು. ಇಂದು ಯಾವುದೇ ಅನುದಾನ ಸೋರಿಕೆಯಾಗದಂತೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಪ್ರಧಾನಿ ಮೋದಿ ಅವರ ಕೊಡುತ್ತಿದ್ದಾರೆ. ಕೋವಿಡ್ ಅನ್ನು ಯಶಶ್ವಿಯಾಗಿ ನಿಭಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರು. 100 ಕೋಟಿ ಜನರಿಗೆ ಉಚಿತವಾಗಿ ಈಗಾಗಲೇ ಲಸಿಕೆ ಹಾಕಲಾಗಿದೆ, ಇದೊಂದು ದಾಖಲೆ ಎಂದರು.