ಮಂಡ್ಯ: ಮಂಡ್ಯದ ನಾಗಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಾಗಮಂಗಲ ತಾಲೂಕಿನ ಕಸಲಗೆರೆ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು ಗ್ರಾಮದ ಚಂದ್ರಣ್ಣ(50) ಮೃತ ದುರ್ದೈವಿ.
ಅದೇ ಗ್ರಾಮದ ಬಸವರಾಜು ಅಪಘಾತವೆಸಗಿದ ಪಾನಮತ್ತ ಚಾಲಕ. ಕೆಲಸ ನಿಮಿತ್ತ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದ ಬಸವರಾಜು.. ಬೇರೊಬ್ಬರ ರೇಂಜ್ ರೋವರ್ ಕಾರು ತಂದಿದ್ದ ಎನ್ನಲಾಗಿದೆ. ವಾಪಾಸ್ ಬೆಂಗಳೂರಿಗೆ ತೆರಳುವ ವೇಳೆ ಅಪಘಾತ ನಡೆದಿದೆ ಎಂಬ ಮಾಹಿತಿ ಇದೆ.
ಮದ್ಯ ಸೇವಿಸಿ ಅತಿವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಚಂದ್ರಣ್ಣ ಎಂಬುವರಿಗೆ ರೇಂಜ್ ರೋವರ್ ಕಾರ್ ಡಿಕ್ಕಿಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದು ಅರ್ಧ ಕಿ.ಮೀಗೂ ಹೆಚ್ಚು ದೂರ ಮೃತದೇಹವನ್ನ ಕಾರ್ ಎಳೆದೊಯ್ದಿದೆಯಂತೆ.
ಸದ್ಯ ಪಾನಮತ್ತ ಚಾಲಕ ಪೊಲೀಸರ ವಶಕ್ಕೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮಾಲೀಕತ್ವದ ಕಾರ್ ಎನ್ನಲಾಗ್ತಿದೆ.. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.