ಲಕ್ನೋ: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್ ತಲೆಗೆ 51 ಲಕ್ಷ ಘೋಷಣೆ ಮಾಡಿದ್ದ ಮುಸ್ಲಿಂ ನಾಯಕನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಶಹಜೀಬ್ ರಿಜ್ವಿ ಸಮಾಜವಾದಿ ಪಕ್ಷದ ಮಾಜಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿದ್ದು, ಈತನನ್ನು ಮೀರತ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೀರತ್ ನ ಫಲ್ವಾಡಾ ಪಟ್ಟಣದ ರಸೂಲ್ಪುರ ಗ್ರಾಮದ ನಿವಾಸಿಯಾಗಿರುವ ರಿಜ್ವಿ, ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದನು. ವಿಡಿಯೋದಲ್ಲಿ ಆತ, ಫೇಸ್ಬುಕ್ ನಲ್ಲಿ ಸಮುದಾಯದ ಬಗ್ಗೆ ಬರೆದುಕೊಂಡಿರುವ ನವೀನ್ ತಲೆಯನ್ನು ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದನು. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ರಿಜ್ವಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಶಾಸಕರ ಸಂಬಂಧಿಯ ಪೋಸ್ಟ್ ನಿಂದಾಗಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಅದಕ್ಕೆ ಪ್ರತಿಯಾಗಿ ಆತನ ತಲೆ ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಿಸಿದ್ದನು. ಈ ಸಂಬಂಧ ನನ್ನನ್ನು ಬೆಂಬಲಿಸುವವರು ಹಣ ಸಂಗ್ರಹಿಸಿ ಕೊಡಿ ಎಂದು ಕೂಡ ರಿಜ್ವಿ ವಿಡಿಯೋದಲ್ಲಿ ಹೇಳಿದ್ದಾನೆ. ಸದ್ಯ ರಿಜ್ವಿಯನ್ನು ಬಂಧಿಸಿರುವ ಮಾಹಿತಿ ನಿಡಿದ ಮೀರತ್ ನ ಪೊಲೀಸ್ ವರಿಷ್ಠಾಧಿಕಾರಿ, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 153(ಎ)(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ) ಹಾಗೂ 505(2) (ಕೋಮು ಸಂಘರ್ಷಕ್ಕೆ ಪ್ರೇರೇಪಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.