ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರ ಅಳವಡಿಕೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ತಾಲೂಕು ನೊರನಕ್ಕಿ ಗ್ರಾಮ ಪಂಚಾಯಿತಿಯಲ್ಲಿ ವಿವಾದ ಏರ್ಪಟ್ಟಿದ್ದು, ದೂರು- ಪ್ರತಿ ದೂರು ದಾಖಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಗ್ರಾಪಂ ಕಚೇರಿಯಲ್ಲಿ ಸೆ.17ರಂದು ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ನಿಮಿತ್ತ ಫೋಟೋ ಹಾಕಲಾಗಿದೆ. ಇದಕ್ಕೆ ಜೆಡಿಎಸ್ ಬೆಂಬಲಿತ ಸದಸ್ಯರು ಹಾಗೂ ಅಧಿಕಾರಿ ವರ್ಗ ವಿರೋಧ ವ್ಯಕ್ತಪಡಿಸಿದೆ. ಮತ್ತೊಂದು ಕಡೆ ಬಿಜೆಪಿ ಬೆಂಬಲಿತರು ಪಿಡಿಒ ವಿರುದ್ಧ ಕೆಂಡಾಮಂಡಲರಾಗಿ ಎಫ್ಐಆರ್ ದಾಖಲಿಸಿದ್ದಾರೆ.
ಫೋಟೋ ಹಾಕುವುದು ಬೇಡ ಎಂದು ಸೂಚಿಸಿದ್ದೆವು. ಆದರೂ ಕರ್ತವ್ಯಕ್ಕೆ ಅಡ್ಡಿಪಡಿಸಿ ಫೋಟೋ ಹಾಕಿದ್ದಾರೆ ಎಂದು ಸದಸ್ಯರಾದ ಭಾರ್ಗವಿ, ಚಂದ್ರಕಲಾ, ನಿಂಗೇಗೌಡ, ಲಕ್ಷ್ಮೀಶ ಮತ್ತು ಬಿಜೆಪಿ ಮುಖಂಡರಾದ ಗಿರೀಶ್, ಮಧು ಸೇರಿದಂತೆ 20 ಜನರ ವಿರುದ್ಧ ಪಿಡಿಒ ಪ್ರತಿ ದೂರು ದಾಖಲಿಸಿದ್ದಾರೆ.
ನಾನು ಪಿಡಿಒ ಒಪ್ಪಿಗೆ ಪಡೆದು ಫೋಟೋ ಹಾಕಿದ್ದೆ. ಆದರೀಗ ನನ್ನ ಜಾತಿ ಬಗ್ಗೆ ನಿಂದಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಯಾರೋ ಉತ್ತರ ಭಾರತದವನ ಫೋಟೋ ಹಾಕುತ್ತೀಯ ಎಂದು ಪ್ರಧಾನಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಹಲವರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸದಸ್ಯೆಯು ಪಿಡಿಒ, ಬಿಲ್ಕಲೆಕ್ಟರ್, ಅಕೌಟೆಂಟ್, ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 16 ಜನರ ವಿರುದ್ಧ ದೂರು ನೀಡಿದ್ದಾರೆ.
ಪ್ರಧಾನ ಮಂತ್ರಿಯ ಜನ್ಮ ದಿನಾಚರಣೆ ಬಿಜೆಪಿ- ಜೆಡಿಎಸ್ ಮುಸುಕಿನ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕ್ಷೇತ್ರ ಇದಾಗಿದೆ.