ರಾಯಚೂರು: ಅಣ್ಣನ ಮೃತಪಟ್ಟ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೀಡಾಗಿ ತಂಗಿಯೂ ಸಾವನಪ್ಪಿದ ಮನಕಲಕುವ ಘಟನೆ ತಾಲೂಕಿನ ಹುಣಸಿಹಾಳಹುಡಾದಲ್ಲಿ ಮಂಗಳವಾರ ಜರುಗಿದೆ.
ಹುಣಸಿಹಾಳಹುಡಾದ ನರಸಪ್ಪ ಹೀರಾ (65) ಅನಾರೋಗ್ಯದಿಂದ ನಗರದ ನವೀನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅಣ್ಣನ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ತಂಗಿ ಸಿದ್ದಮ್ಮ (50) ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಅಣ್ಣನ ಯೋಗಕ್ಷೇಮ ವಿಚಾರಿಸಲು ಸಿರವಾರದಿಂದ ಬಂದಿದ್ದರು. ಆಸ್ಪತ್ರೆಯಲ್ಲಿ ಅಣ್ಣ ಅಗಲಿದ್ದಾನೆಂಬ ಸುದ್ದಿ ತಿಳಿಯುತ್ತಿದ್ದಂತೆ ಅಣ್ಣನ ಮನೆಯಲ್ಲಿಯೇ ತಂಗಿ ಮೃತಪಟ್ಟಿದ್ದಾರೆ. ಅಣ್ಣ ತಂಗಿಯ ಅನ್ಯೋನ್ಯತೆ ಕಂಡು ನೆರೆದವರ ಮನಕಲಕುವಂತಿತ್ತು. ಒಂದೆ ದಿನದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ನರಸಪ್ಪ ಹೀರಾ ಇಬ್ಬರು ಪತ್ನಿಯರು, ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದರೆ, ತಂಗಿ ಸಿದ್ದಮ್ಮ ಪತಿ, ಮೂವರು ಪುತ್ರರನ್ನು ಅಗಲಿದ್ದಾರೆ.
ನರಸಪ್ಪ ಹೀರಾ ಅಂತ್ಯಕ್ರಿಯೆ ಹುಟ್ಟೂರಾದ ಹೀರಾದಲ್ಲಿ ಬುಧವಾರ ನೆರವೇರಲಿದ್ದು, ಸಿದ್ದಮ್ಮ ಅವರ ಅಂತ್ಯಕ್ರಿಯೆ ಸಿರವಾರದಲ್ಲಿ ನೆರವೇರಲಿದೆ ಎಂದು ಕುಟುಂಬ ತಿಳಿಸಿವೆ.