ದಾವಣಗೆರೆ: ಕರುನಾಡಿನಲ್ಲಿ ಕನ್ನಡವೇ ಆಡಳಿತ ಭಾಷೆ, ಎಲ್ಲ ವ್ಯವಹಾರಗಳು ಕನ್ನಡದಲ್ಲೇ ನಡೆಯಬೇಕು ಎಂಬುದು ಸರಕಾರದ ನಿಯಮ. ಆದರೆ ಕರುನಾಡಿನ ಲಾಂಛನದಲ್ಲೇ ಕನ್ನಡ ಮರೆಯಾಗಿರುವುದು ವಿಪರ್ಯಾಸ!
ಇದು ವಿಚಿತ್ರವೆನಿಸಿದರೂ ಸತ್ಯ. ಆರು ದಶಕಗಳಿಂದ ನಮ್ಮ ಲಾಂಛನದಲ್ಲಿರುವ “ಸತ್ಯಮೇವ ಜಯತೇ’ ಹಿಂದಿಯಲ್ಲೇ ಇದೆ. ಕನ್ನಡ ಇಗೆ ಬದಲಾಯಿಸಿಲ್ಲ.
ಹಿಂದಿ ಲಿಪಿಯಲ್ಲಿ “ಸತ್ಯಮೇವ ಜಯತೇ’ ಎಂದು ಬರೆದಿರುವ ಲಾಂಛನವನ್ನೇ ಇಂದು ಎಲ್ಲೆಡೆ ಬಳಕೆ ಮಾಡಲಾಗುತ್ತಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳ ಲಾಂಛನಗಳಲ್ಲಿ ಆಯಾ ರಾಜ್ಯ ಭಾಷೆಗಳನ್ನೇ ಬಳಕೆ ಮಾಡಲಾಗಿದೆ.
ಬದಲಾವಣೆಗೆ ನಡೆದಿತ್ತು ಯತ್ನ:
ಲಾಂಛನದಲ್ಲಿ ಹಿಂದಿ ಲಿಪಿ ಇರುವ ಬಗ್ಗೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್.ಜಿ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕನ್ನಡದಲ್ಲೇ “ಸತ್ಯಮೇವ ಜಯತೇ’ ಎಂದು ಬರೆಯಲು ಸರಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಅನುಮತಿಗಾಗಿ ಕಳುಹಿಸಿಕೊಟ್ಟಿದ್ದು, ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ.
1957ರಲ್ಲಿ ರೂಪಿತವಾಗಿದ್ದ ಲಾಂಛನ:
ಕರ್ನಾಟಕ ಸರಕಾರದ ಅಧಿಕೃತ ಲಾಂಛನ ರೂಪುಗೊಂಡದ್ದು 1957ರಲ್ಲಿ. ಅಂದಿನಿಂದ ಇದುವರೆಗೆ ಅದೇ ಉಳಿದುಕೊಂಡಿದೆ. ಇತ್ತೀಚೆಗೆ ಕೆಲವು ಕನ್ನಡಾಭಿಮಾನಿಗಳು, ಸಂಘಟನೆಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೂ ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹಾಕುತ್ತಿದ್ದಾರೆ.
ಲಾಂಛನದಲ್ಲಿ ಕನ್ನಡ ಬಳಕೆ ಮಾಡುವಂತೆ ಯಾವುದೇ ಪ್ರಸ್ತಾವ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.– ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
ಎಲ್ಲವೂ ಕನ್ನಡ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಲಾಂಛನದಲ್ಲಿ ಕನ್ನಡ ಬಳಕೆಗೆ ಸರಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿರುವುದರಿಂದ ಅವರೇ ತೀರ್ಮಾನಿಸಬೇಕು.– ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ