ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಉದ್ಭವವಾಗಿದ್ದು, ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಬಯಸಿರುವ ಬಿಜೆಪಿ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಅಖಾಡಕ್ಕೆ ಇಳಿಸಿದೆ. ಕಾಂಗ್ರೆಸ್ ಪಕ್ಷದ ಜತೆ ಮೈತ್ರಿಗೆ ಜೆಡಿಎಸ್ ಸಿದ್ಧವಾಗಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಜೆಡಿಎಸ್ ಪಕ್ಷದೊಂದಿಗೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ರಾಜ್ಯ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಗಲಿಗೇರಿಸಿದೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜತೆ ಮಾತುಕತೆ ನಡೆಸಲಿದ್ದು, ಜೆಡಿಎಸ್ ಜತೆಗಿನ ಬಿಜೆಪಿ ಮೈತ್ರಿ ವಿಚಾರ ಅಂತಿಮ ಆಗುವ ತನಕ ಮೇಯರ್ ಚುನಾವಣೆ ನೋಟಿಫಿಕೇಶನ್ ಹೊರಡಿಸುವುದೂ ಅನುಮಾನ ಎನ್ನಲಾಗಿದೆ.
ಸದ್ಯ ರಾಜ್ಯದ ಮುಖ್ಯಮಂತ್ರಿಗಳೇ ಸಂಧಾನಕ್ಕೆ ಮುಂದಾಗಿರುವುದರಿಂದ ಜೆಡಿಎಸ್ ತನ್ನ ನಿಲುವನ್ನು ಬದಲಿಸಿ ಕಾಂಗ್ರೆಸ್ ಬದಲು ಬಿಜೆಪಿಯೊಂದಿಗೆ ಸಖ್ಯ ಬೆಳೆಸಲಿದೆಯಾ? ಅಥವಾ ಅಷ್ಟರಲ್ಲಿ ಕಾಂಗ್ರೆಸ್ ಬೇರೆ ಏನಾದರೂ ತಂತ್ರಗಾರಿಕೆ ಹೂಡಲಿದೆಯಾ? ಎಂಬ ಕುತೂಹಲ ಹುಟ್ಟಿಕೊಂಡಿದೆ. ಮೇಲಾಗಿ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಆಪರೇಷನ್ ಕಮಲದ ಭೀತಿಯೂ ಕಾಡುತ್ತಿದೆ ಎನ್ನಲಾಗಿದ್ದು ಅದಕ್ಕೆ ನಾಯಕರು ಹೇಗೆ ಪ್ರತಿಕ್ರಿಸಲಿದ್ದಾರೆ ಎಂದು ನೋಡಬೇಕಿದೆ.
ಇತ್ತ, ಕಾಂಗ್ರೆಸ್ ಕೂಡಾ ಪಾಲಿಕೆಯ ಮೇಯರ್ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಕಲಬುರಗಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಡಿ.ಕೆ.ಶಿವಕುಮಾರ್ ಭೇಟಿಗೆ ಆಗಮಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಆಗಮಿಸಿದ ಸದಸ್ಯರು ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಸಂಬಂಧ ಚರ್ಚೆ ನಡೆಸಿದ್ದಾರೆ.
ಡಿ.ಕೆ.ಶಿವಕುಮಾರ್ ಭೇಟಿಗಾಗಿ ಬಂದ ಪಾಲಿಕೆ ಸದಸ್ಯರು
ನಾಳೆ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ತೆರಳಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹುಬ್ಬಳ್ಳಿ ಮಹಾನಗರ ಪಾಲಿಕೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ನೂತನ ಕಾರ್ಪೋರೇಟರ್ ಗಳ ಜತೆಗೆ ಸಭೆ ನಡೆಸಿದ್ದಾರೆ. ಎರಡು ಪಾಲಿಕೆಗಳು ಕೈ ತಪ್ಪಿ ಹೋಗಿರುವ ಕುರಿತು ಪರಾಮರ್ಶೆ ನಡೆಸಲಿರುವ ಡಿ.ಕೆ.ಶಿವಕುಮಾರ್, ಹುಬ್ಬಳ್ಳಿ ಹಾಗೂ ಬೆಳಗಾವಿ ಕಾಂಗ್ರೆಸ್ ಮುಖಂಡರು, ಶಾಸಕರ ಜತೆ ನಾಳಿನ ಸಭೆಯಲ್ಲಿ ಮಾತನಾಡಲಿದ್ದಾರೆ. ಜೆಡಿಎಸ್ ಕೈ ಕೊಟ್ಟರೆ ಕಲಬುರಗಿ ಮಹಾನಗರ ಪಾಲಿಕೆ ಕೂಡ ಕೈ ತಪ್ಪುವ ಆತಂಕ ಇದ್ದು, ಮಹಾನಗರ ಪಾಲಿಕೆಯಲ್ಲಿ ಪಕ್ಷದ ಹಿನ್ನಡೆಯಿಂದ ಪಕ್ಷದೊಳಗೆ ಒಂದಷ್ಟು ತಪ್ಪು ಸಂದೇಶ ರವಾನೆಯಾಗಿದೆ. ಈ ಕಾರಣಕ್ಕೆ ಹಿನ್ನಡೆ ಬಗ್ಗೆ ಸ್ಥಳೀಯ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಪೋರೇಟರ್ಗಳ ಜತೆಗೆ ಗಂಭೀರ ಚರ್ಚೆ ನಡೆಸಲಿದ್ದಾರೆ ಎಂದೆನ್ನಲಾಗಿದೆ.