Breaking News
Home / ರಾಜ್ಯ / ಪಕ್ಷ ಸಂಘಟನೆಗೆ ಮಮತಾ ಬ್ಯಾನರ್ಜಿಯೇ ಸ್ಫೂರ್ತಿ: ಎಚ್‌.ಡಿ. ಕುಮಾರಸ್ವಾಮಿ

ಪಕ್ಷ ಸಂಘಟನೆಗೆ ಮಮತಾ ಬ್ಯಾನರ್ಜಿಯೇ ಸ್ಫೂರ್ತಿ: ಎಚ್‌.ಡಿ. ಕುಮಾರಸ್ವಾಮಿ

Spread the love

ಹುಬ್ಬಳ್ಳಿ: ‘ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನನಗೆ ಸ್ಫೂರ್ತಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಎಂಸಿಯ ಸುಮಾರು 60ರಿಂದ 70 ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಿತು. ಆದರೂ, ಮಮತಾ ಅವರು ಏಕಾಂಗಿಯಾಗಿ ಹೋರಾಡಿ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದರು. ಪಕ್ಷ ಕಟ್ಟಲು ಅವರಿಗಿಂತ ಸ್ಫೂರ್ತಿ ಬೇಕೇ’ ಎಂದರು.

‘ಜೆಡಿಎಸ್ ಅಡಿಪಾಯ ಗಟ್ಟಿಯಾಗಿದೆ. ಯಾರೇ ಬಂದರೂ, ಹೋದರೂ ಪಕ್ಷದ ಬೇರುಗಳು ಅಲುಗಾಡುವುದಿಲ್ಲ. ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷ ತೊರೆಯುವುದು ಎಲ್ಲರಿಗೂ ಗೊತ್ತಿರುವ ಹಳೇ ಕಥೆ. ದೇವೇಗೌಡರು ಮತ್ತೊಮ್ಮೆ ಅವರಿಗೆ ಕರೆ ಮಾಡಿ ಒಟ್ಟಾಗಿ ಕೆಲಸ ಮಾಡೋಣ ಬಾ ಎಂದು ಕರೆದರೂ, ಈಗಾಗಲೇ ನಿರ್ಧರಿಸಿರುವುದಾಗಿ ಹೇಳಿದರು. ಹೀಗಿರುವಾಗ ನಾವೇನು ಮಾಡಲು ಸಾಧ್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿರುವ ನನಗೆ, ಕೆಟ್ಟ ಅನುಭವವಾಗಿದೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಯುವಜನರನ್ನು ಒಳಗೊಂಡು ಪಕ್ಷವನ್ನು ಸಂಘಟಿಸಲು ಮುಂದಾಗಿದ್ದೇನೆ. ಕೆಲಸ ಮಾಡುವವರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ’ ಎಂದರು.

‘ಅನುಭವ ಬೇಕು’
‘ಯುವ ಮುಖಂಡರಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರಿಗೆ ರಾಜಕೀಯದಲ್ಲಿ ಇನ್ನೂ ಅನುಭವ ಬೇಕು. ನನಗೇ ಹಲವು ವರ್ಷಗಳು ಬೇಕಾಯಿತು. ಹೋರಾಟ ಮತ್ತು ಪಾದಯಾತ್ರೆಗಳನ್ನು ಕೈಗೊಳ್ಳಲು ಅವರಿನ್ನೂ ಪಳಗಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಬಸವರಾಜ ಬೊಮ್ಮಾಯಿ ಅವರು, ಮುಖ್ಯಮಂತ್ರಿಯಾದ ಬಳಿಕವೂ ನಾನು ಜನತಾ ಪರಿವಾರದವನು ಎಂದು ನೆನೆಪಿಸಿಕೊಂಡಿದ್ದಾರೆ. ಹಾಗಾಗಿಯೇ, ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ, ಎಂದಿಗೂ ಜನತಾ ಪರಿವಾರದವನು ಎನ್ನಲಿಲ್ಲ. ಅವರ ಮೊದಲ ಅಜೆಂಡಾ ಜೆಡಿಎಸ್ ಮುಗಿಸುವುದೇ ಆಗಿತ್ತು’ ಎಂದರು.

‘ಬಂದೂಕಿನಿಂದ ಕ್ರಾಂತಿಯಾಗದು’
‘ಕ್ರಾಂತಿಕಾರಿ ಬದಲಾವಣೆಗಳು ಉತ್ತಮ ಆಡಳಿತದಿಂದ ಸಾಧ್ಯವೇ ಹೊರತು ಬಂದೂಕಿನಿಂದಲ್ಲ. ನಟ ಚೇತನ್‌ ಅವರಿಗೆ ಕ್ಯಾಮೆರಾ ಮುಂದೆ ನಿಂತು ಮಾತನಾಡುವುದನ್ನು ಬಿಟ್ಟರೆ, ರಾಜಕೀಯ ಗೊತ್ತಿಲ್ಲ. ನಾನೂ ಸಿನಿಮಾ ಹಲವು ಸಿನಿಮಾಗಳನ್ನು ನಿರ್ಮಿಸಿದ್ದೇನೆ’ ಎಂದು ತಮ್ಮ ಟ್ವೀಟ್ ಟೀಕಿಸಿದ್ದ ನಟ ಚೇತನ್ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

‘ಆರೋಗ್ಯ, ಶಿಕ್ಷಣ, ರೈತನ ಬದುಕು ಸುಧಾರಣೆ, ವಸತಿ ಹಾಗೂ ಯುವಜನರಿಗೆ ಉದ್ಯೋಗ ನೀಡುವುದರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಅದಕ್ಕೆ ಸ್ವತಂತ್ರ ಅಧಿಕಾರ ಬೇಕಿರುವುದಿಂದ, ಮುಂದಿನ ಬಾರಿ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಡಿ ಎಂದು ಜನರನ್ನು ಕೇಳಿದ್ದೇನೆ. ಇದನ್ನು ಸರಿಯಾಗಿ ಗ್ರಹಿಸದ ಚೇತನ್ ಅವರಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದರು.


Spread the love

About Laxminews 24x7

Check Also

ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆ

Spread the love ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಪಾಟೀಲ್ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ