ಬೆಳಗಾವಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದು, ಮಾಜಿ ಸಚಿವನಿಗೆ ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಹಾಗೂ ಸಾಕ್ಷ್ಯನಾಶ ಕೇಸ್ ಗಳಲ್ಲಿ ಬಂಧನಕ್ಕೀಡಾಗಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ, ಕಳೆದ 6 ತಿಂಗಳಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು. ಮೊನ್ನೆಯೇ ಜಾಮೀನು ಸಿಕ್ಕರೂ ಜಾಮೀನು ಪ್ರತಿ ಜೈಲಧಿಕಾರಿಗಳ ಕೈಸೇರದ ಹಿನ್ನೆಲೆಯಲ್ಲಿ ಮಾಜಿ ಸಚಿವರಿಗೆ ಬಿಡುಗಡೆಗೆ ಎರಡು ದಿನ ವಿಳಂಬವಾಗಿತ್ತು.
ಇದೀಗ ಜಾಮೀನುಪ್ರತಿ ಸಿಕ್ಕ ಹಿನ್ನೆಲೆಯಲ್ಲಿ ಹಿಂದಲಗಾ ಜೈಲಿನಿಂದ ವಿನಯ್ ಕುಲಕರ್ಣಿ ಅವರನ್ನು ಬಿಡುಗಡೆ ಮಾಡಲಾಗಿದೆ. ಮಾಜಿ ಸಚಿವ ಬಿಡುಗಡೆಯಾಗುತ್ತಿದ್ದಂತೆ ಜೈಲಿನ ಬಳಿ ನೆರೆದಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವಿನಯ್ ಪರ ಘೋಷಣೆ ಕೂಗಿ ಸಂಭ್ರಮದಿಂದ ಬರಮಾದಿಕೊಂಡರು.
ಇನ್ನು ಜೈಲಿನ ಸುತ್ತ ಭದ್ರತೆಗಾಗಿ 60ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಜೈಲಿನ ಬಳಿ ಕೆ ಎಸಾರ್ ಪಿ ತುಕಡಿಯನ್ನು ಕೂಡ ನಿಯೋಜಿಸಲಾಗಿದೆ.