1. ಗೃಹ ಬಳಕೆ ಸಿಲಿಂಡರ್ ಬೆಲೆ ಮತ್ತೆ ಏರಿಕೆ
ಮೊದಲೇ ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಸರ್ಕಾರ ಮತ್ತೆ ಶಾಕ್ಕೊಟ್ಟಿದೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಿದ್ದರಿಂದ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 860 ರೂಪಾಯಿ ಆಗಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 68 ರೂಪಾಯಿ ಏರಿಕೆಯಾಗಿದೆ.
2. ಅಫ್ಘಾನ್ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ ಮೋದಿ
ಆರ್ಥಿಕ ವ್ಯವಹಾರಗಳ ಸಂಪುಟ ಸಭೆ ಇಂದು ನಡೆಯಲಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11ಕ್ಕೆ ಸಭೆ ಆರಂಭವಾಗಲಿದೆ. ಸಭೆಯಲ್ಲಿ ಅಫ್ಘನ್ನ ಪ್ರಸ್ತುತ ಪರಿಸ್ಥಿತಿಯ ಜೊತೆಗೆ ತಾಲಿಬಾನ್ಗಳಿಂದ ಭಾರತಕ್ಕೆ ಉಂಟಾಗಬಹುದಾದ ವಿಪತ್ತುಗಳ ಬಗ್ಗೆ ಚರ್ಚಿಸಲಾಗುತ್ತದೆ. ಅಲ್ಲದೆ, ದೇಶದ ಈಗಿನ ಆರ್ಥಿಕ ಸ್ಥಿತಿ-ಗತಿಗಳ ಬಗ್ಗೆ ಸಚಿವರ ಜೊತೆ ಮಾತುಕತೆ ನಡೆಸಲಾಗುತ್ತೆ. ಅಫ್ಘಾನಿಸ್ತಾನದ ಬೆಳವಣಿಗೆ ವಿಚಾರವಾಗಿ ಮೋದಿ ತುರ್ತು ಸಭೆ ನಡೆಸಿ ಭಾರತ ತನ್ನ ನಾಗರಿಕರನ್ನು ರಕ್ಷಿಸುವುದರ ಜೊತೆಗೆ ಭಾರತಕ್ಕೆ ಬರಲು ಬಯಸುವ ಸಿಖ್ ಮತ್ತು ಹಿಂದೂ ಅಲ್ಪಸಂಖ್ಯಾತರಿಗೆ ಆಶ್ರಯ ನೀಡಲಾಗುತ್ತದೆ. ಸಹಾಯಕ್ಕಾಗಿ ಭಾರತದ ಕಡೆಗೆ ನೋಡುತ್ತಿರುವ ಅಫ್ಘನ್ ಸಹೋದರ ಸಹೋದರಿಯರ ನೆರವಿಗೆ ನಿಲ್ಲುವಂತೆ ಮೋದಿ ಸೂಚಿಸಿದ್ದಾರೆ.
3. ‘ಶೀಘ್ರ ಇಸ್ಲಾಮಿಕ್ ಸರ್ಕಾರ, ಮಹಿಳೆಯರಿಗೆ ಹಕ್ಕು’
ಅಫ್ಘನ್ ಭೂಮಿ ಉಗ್ರರ ಹಿಡಿತಕ್ಕೆ ಒಳಪಟ್ಟ ಬೆನ್ನಲ್ಲೇ ಮೊದಲ ಬಾರಿಗೆ ತಾಲಿಬಾನಿಗಳು ಸುದ್ದಿಗೋಷ್ಟಿ ನಡೆಸಿದ್ದಾರೆ. ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಬೆದರಿಕೆಯಿಲ್ಲ ಅಂತ ತಾಲಿಬಾನ್ ವಕ್ತಾರ ಝಬಿವುಲ್ಲಾ ಮುಜಾಹಿದ್ ಅಭಯ ನೀಡಿದ್ದಾನೆ. ನಮಗೆ ಯಾವುದೇ ಆಂತರಿಕ ಅಥವಾ ಬಾಹ್ಯ ಶತ್ರುಗಳು ಬೇಕಿಲ್ಲ. ನಾವು ಯಾರೊಬ್ಬರನ್ನೂ ದ್ವೇಷಿಸಲ್ಲ. ನಮ್ಮ ನಾಯಕರ ಆದೇಶದಂತೆ ಎಲ್ಲರನ್ನೂ ಕ್ಷಮಿಸಿದ್ದೇವೆ ಎಂದು ಹೇಳಿದ್ದಾನೆ. ಅಫ್ಘಾನಿಸ್ತಾನದಲ್ಲಿ ಶೀಘ್ರದಲ್ಲೇ ಇಸ್ಲಾಮಿಕ್ ಸರ್ಕಾರವನ್ನು ಸ್ಥಾಪಿಸಲಾಗುವುದು. ಬಹುಮುಖ್ಯವಾಗಿ ಮಹಿಳೆಯರ ವಿರುದ್ಧ ಅಸಮಾನತೆಗೆ ಅವಕಾಶ ಕೊಡಲ್ಲ. ಇಸ್ಲಾಂ ನೀಡುವ ಎಲ್ಲ ಹಕ್ಕುಗಳನ್ನೂ ಕೊಡುತ್ತೇವೆ ಅಂತ ಮಹಿಳೆಯರಿಗೆ ಅಭಯ ನೀಡಿದ್ದಾರೆ.
4. ‘ನಾನೇ ಅಪ್ಘಾನಿಸ್ತಾನ ಉಸ್ತುವಾರಿ ಅಧ್ಯಕ್ಷ್ಯ ‘
ನಾನು ದೇಶದ ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷ ಎಂದು ಅಫ್ಘಾನ್ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಘೋಷಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅಮರುಲ್ಲಾ ಸಲೇಹ್, ಕಾಬೂಲ್ ನಗರಕ್ಕೆ ತಾಲಿಬಾನ್ ಉಗ್ರರು ಅಡಿ ಇಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದ್ದಾರೆ. ಸದ್ಯ, ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ನಾನು ದೇಶದ ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷ ಅಂತ ಘೋಷಣೆ ಮಾಡಿಕೊಂಡಿದ್ದಾರೆ. ಈ ಘೋಷಣೆಗೆ ಅಫ್ಘನ್ ಸಂವಿಧಾನ ನನಗೆ ಅಧಿಕಾರ ನೀಡಿದೆ ಅಂತ ಅಮರುಲ್ಲಾ ಸಲೇಹ್ ಪ್ರತಿಪಾದಿಸಿದ್ದಾರೆ.ಇನ್ನು ಅಫ್ಘಾನಿಸ್ತಾನದ ಈ ಬೆಳವಣಿಗೆ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಇದೇ 24 ರಂದು ಸಭೆ ನಡೆಸಿ ಚರ್ಚಿಸಲಿದೆ.
5. ಅಫ್ಘಾನ್ ಪ್ರಜೆಗಳು ನುಸುಳದಂತೆ ಬೃಹತ್ ಗೋಡೆ
ಅಫ್ಘಾನಿಸ್ತಾನದ ಪ್ರಜೆಗಳ ನುಸುಳುವಿಕೆಯನ್ನ ತಡೆಯಲು ಟರ್ಕಿ ಇರಾನಿಯನ್ ಗಡಿ ಪ್ರದೇಶದಲ್ಲಿ 295 ಕಿಲೋ ಮೀಟರ್ ಉದ್ದದ ಬೃಹತ್ ಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ಇರಾನ್ ಮೂಲಕ ನಿರಾಶ್ರಿತರು ಟರ್ಕಿ ಪ್ರವೇಶಿಸಬಾರದು ಎಂಬ ಕಾರಣಕ್ಕೆ ಬೃಹತ್ ಗೋಡೆ ನಿರ್ಮಿಸಲಾಗ್ತಿದ್ದು ಪ್ರಸ್ತುತ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಅಫ್ಘಾನಿಸ್ತಾನದ ಈ ಪರಿಸ್ಥಿತಿಗೆ ಅಮೆರಿಕವೇ ಕಾರಣ ಅಂತ ಚೀನಾ ಆರೋಪಿಸಿದೆ.
6. ‘ಅಫ್ಘಾನ್ ಜನರಿಗೆ ಆಶ್ರಯ ನೀಡಲು ಬ್ರಿಟನ್ ಸಿದ್ಧ’
ಅಫ್ಘಾನಿಸ್ತಾನದ 25 ಸಾವಿರ ಜನರಿಗೆ ಬ್ರಿಟನ್ನಲ್ಲಿ ಆಶ್ರಯ ಕೊಡುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. ಇನ್ನು ಅಫ್ಘಾನಿಸ್ತಾನದ ವಿಚಾರವಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮುಂದಿನ ವಾರದಲ್ಲಿ ಜಿ-7 ಶೃಂಗಸಭೆ ಆಯೋಜನೆ ಮಾಡಲಿದ್ದಾರೆ. ಬ್ರಿಟನ್ ಪಿಎಂ ಬೋರಿಸ್ ಬೈಡನ್ರನ್ನ ವರ್ಚುವಲ್ ಸಭೆಗೆ ಆಹ್ವಾನಿಸಿದ್ದಾರೆ.
7. ಪ್ರತಿಮೆ ಧ್ವಂಸಕ್ಕೆ ಪಾಕ್ ವಿರುದ್ಧ ಭಾರತ ಕಿಡಿ
ಪಾಕಿಸ್ತಾನದಲ್ಲಿ ನಿರ್ಮಿಸಿಲಾಗಿದ್ದ ಸಿಖ್ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ವಿರುದ್ಧ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಾಚ್ಚೀ ಕಿಡಿಕಾರಿದ್ದಾರೆ. 2019 ರಿಂದ ಈ ಪ್ರತಿಮೆಯನ್ನು 3 ಬಾರಿ ಕೆಡವಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಪ್ರತಿಮೆ ಹಾಗೂ ದೇವಸ್ಥಾನಗಳನ್ನ ದುಷ್ಕರ್ಮಿಗಳು ಕೆಡವುತ್ತಿರುವ ಘಟನೆ ನಡೆಯುತ್ತಲೇ ಇದೆ. ಆದ್ರೆ ಪಾಕ್ ಸರ್ಕಾರ ಮಾತ್ರ ಈ ರೀತಿಯ ಘಟನೆಗಳನ್ನ ತಡೆಯುವುದರಲ್ಲಿ ವಿಫಲವಾಗಿದೆ. ಪಾಕಿಸ್ತಾನಿಗಳ ಈ ಕೃತ್ಯ ಖಂಡನೀಯ ಅಂತ ಅರಿಂದಮ್ ಆಕ್ರೋಶ ಹೊರಹಾಕಿದ್ದಾರೆ.
8. ಅಸ್ಸಾಂ – ಮಿಜೋರಾಂ ಮಧ್ಯೆ ಮತ್ತೆ ಗಡಿ ಘರ್ಷಣೆ
ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಿಜೋರಾಂ ನಾಗರಿಕರ ಮೇಲೆ ಅಸ್ಸಾಂ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಒಬ್ಬ ನಾಗರಿಕ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಜುಲೈ 26ರಂದು ಈ ಎರಡೂ ಈಶಾನ್ಯ ರಾಜ್ಯಗಳ ಪೊಲೀಸ್ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಏಳು ಜನ ಸಾವನ್ನಪ್ಪಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಳಿಕ, ಸಂಧಾನ ಪ್ರಕ್ರಿಯೆ ನಡೆದು, ಶಾಂತಿ ಕಾಪಾಡಲು ಉಭಯ ರಾಜ್ಯಗಳು ಒಪ್ಪಿಗೆ ಸೂಚಿಸಿದ್ದವು. ಈ ಮಧ್ಯೆ ಮತ್ತೆ ಉದ್ವಿಗ್ನತೆ ತಲೆದೋರಿದೆ.
9. ಪುಣೆಯಲ್ಲಿ ಪ್ರಧಾನಿ ‘ನರೇಂದ್ರ ಮೋದಿ’ ದೇವಾಲಯ
ಬಿಜೆಪಿ ಕಾರ್ಯಕರ್ತನೊಬ್ಬ ಪುಣೆಯಲ್ಲಿ ಪ್ರಧಾನಿ ಮೋದಿ ದೇವಸ್ಥಾನ ನಿರ್ಮಿಸಿದ್ದಾನೆ. ಮಯೂರ್ ಮುಂಡೆ ಎಂಬುವವರು ಸ್ವತಃ ದೇವಾಲಯ ನಿರ್ಮಾಣ ಮಾಡಿದ್ದಲ್ಲದೇ ತಾವೇ ಮೋದಿ ವಿಗ್ರಹ ಕೆತ್ತಿದ್ದಾರೆ. ಪ್ರಧಾನಿ ಮೋದಿ, ನಮ್ಮ ಧರ್ಮವನ್ನು ಉಳಿಸಲು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಮೋದಿ ದೇವಾಲಯವನ್ನೇ ಅವರಿಗೆ ಕೊಡುಗೆಯಾಗಿ ನೀಡಲು ಬಯಸಿದ್ದಾಗಿ ತಿಳಿಸಿದ್ದಾರೆ. ಇನ್ನು ಒಲಿಂಪಿಕ್ಸ್ನಲ್ಲಿ ಯುವ ಆಟಗಾರರು ಪದಕಗಳನ್ನ ತರಲು ಪ್ರಧಾನಿ ನರೇಂದ್ರ ಮೋದಿ ಕಠಿಣ ಶ್ರಮವೇ ಕಾರಣ ಅಂತ ಕೇಂದ್ರ ಸಚಿವ ದೇವ್ಸಿನ್ಹಾ ಚೌಹಾಣ್ ಹೇಳಿದ್ದಾರೆ.
10. ‘ಒಬ್ಬರನ್ನ ಕೆಣಕಿದ್ರೆ, 11 ಮಂದಿ ತಿರುಗಿ ಬೀಳ್ತೀವಿ’
ನಮ್ಮ ತಂಡದ ಒಬ್ಬ ಆಟಗಾರನನ್ನು ಕೆಣಕಿದ್ರೆ ಇಡೀ ಟೀಂ ಇಂಡಿಯಾ ತಂಡವನ್ನೇ ಕೆಣಕಿದಂತೆ ಅಂತ ಕೆ.ಎಲ್ ರಾಹುಲ್ ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ನಡೆದ ಪಂದ್ಯದ ವೇಳೆ ಆಟಗಾರರು ಸೇರಿದಂತೆ ವೀಕ್ಷಕರು ನಮ್ಮ ತಂಡದ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆ. ನೀವು ನಮ್ಮ ಒಬ್ಬ ಆಟಗಾರರನ್ನ ಕೆಣಕಿದರೆ, ನಾವು 10 ಮಂದಿ ಕೂಡ ತಿರುಗಿ ಬೀಳ್ತೀವಿ. ಅಂತಹ ಬಲಿಷ್ಟ ತಂಡ ನಮ್ಮದು ಅಂತ ಕೆಎಲ್ ರಾಹುಲ್ ಮಾತಿನ ಚಾಟಿ ಬೀಸಿದ್ದಾರೆ.