ಹಾವೇರಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಬಂದ ಬೆನ್ನಲ್ಲೇ ಕಡಿಮೆ ಅಂಕ ಬಂದಿದೆ ಹಾಗೂ ಅನುತ್ತೀರ್ಣನಾಗಿದ್ದೇನೆ ಎಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಣಿತ ವಿಷಯದಲ್ಲಿ ಫೇಲಾದ ಕಾರಣಕ್ಕೆ ಹಾವೇರಿಯ ದ್ಯಾಮವ್ವನ ಗುಡಿ ಓಣಿಯಲ್ಲಿ ವೈಷ್ಣವಿ ರಿತ್ತಿ (16) ಮನೆಯಲ್ಲಿ ವಿಷ ಸೇವಿಸಿದ್ದಾಳೆ. ಬಾಲಕಿ ಒದ್ದಾಟವನ್ನು ಗಮನಿಸಿದ ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.
ಇನ್ನೊಂದೆಡೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿವೆ ಎಂದು ಭಾರತಿ ಕೋಟಿ (16) ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬ್ಯಾಡಗಿ ತಾಲೂಕಿನ ಕಾಶಂಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಾರತಿ ಕೋಟಿಗೆ ಶೇ.61ರಷ್ಟು ಅಂಕಗಳು ಬಂದಿದ್ದವು.