ಬಾಗಲಕೋಟೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ತಾಲ್ಲೂಕಿನ ಮುಖಚಂಡಿ ತಾಂಡಾದ ದುರ್ಗಾದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಬಸಪ್ಪ ಹುಡೇದ ಅವರಿಗೆ ಹೃದಯ ಸಂಬಂಧಿ ಇರುವ ಕಾಯಿಲೆ ದೃಢಪಟ್ಟ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ವಿದ್ಯಾರ್ಥಿನಿಯು 625ಕ್ಕೆ 625 ಅಂಕ ಪಡೆದುಕೊಂಡ ಹಿನ್ನೆಲೆಯಲ್ಲಿ ಸಂತಸದಿಂದ ಅಭಿನಂದಿಸಿದರು. ಆ ಬಾಲಕಿಗೆ ಹೃದಯ ಸಂಬಂಧಿ ರೋಗವಿರುವ ಬಗ್ಗೆ ತಿಳಿದ ಕೂಡಲೇ ಬಾಲಕಿಯ ಪೋಷಕರೊಂದಿಗೆ ಮಾತನಾಡಿದರು. ಬಾಲಕಿಗೆ ಹೃದಯ ಸಂಬಂಧಿ ರೋಗದ ಜೊತೆಗೆ ಉಸಿರಾಟದ ತೊಂದರೆಯೂ ಇರುವುದನ್ನು ಧೃಡಪಡಿಸಿಕೊಂಡು ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರೆಮಾಡಿ, ಬಾಲಕಿಯನ್ನು ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಿ, ಹೆಚ್ವಿನ ಚಿಕಿತ್ಸೆಯ ಅಗತ್ಯವಿದ್ದರೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಬಾಲಕಿಯ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಯ ನಿರ್ದೇಶಕರೊಡನೆಯೂ ಮಾತನಾಡುವ ಭರವಸೆ ನೀಡಿದರು.
ನೋವು ಮೆಟ್ಟಿನಿಂತು ಮಹತ್ವದ ಸಾಧನೆ ಮೆರೆದ ಬಾಲಕಿ
ಸಾಧನೆಗೆ ಬಡತನ, ಸೌಲಭ್ಯಗಳ ಕೊರತೆ ಮೊದಲಾದ ಸಂಗತಿಗಳು ಅಡ್ಡಿಯಾಗಲಾರವು ಅಂತ ಈ 15ರ ಪುಟ್ಟ ಬಾಲೆ ಸಾಬೀತು ಮಾಡಿದ್ದಾಳೆ. ನಾವು ಮಾತಾಡುತ್ತಿರುವ ಬಾಲಕಿಯ ಹೆಸರು ಗಂಗಮ್ಮ. ಅವಳ ಸಾಧನೆ ಅಸಾಧಾರಣವಾದದ್ದು. ಶಾಲೆಗಳು ಮುಚ್ಚಿ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದರಿಂದ ಮಕ್ಕಳು ಓದಿನೆಡೆ ಗಮನ ಹರಿಸುತ್ತಿಲ್ಲ, ಈ ವರ್ಷ ಅವರು ಪಾಸಾಗೋದೇ ಕಷ್ಟ ಎಂದು ಸಾವಿರಾರು ಪೋಷಕರು ದೂರುತ್ತಿದ್ದಾರೆ. ಆದರೆ ಬಾಗಲಕೋಟೆ ತಾಲ್ಲೂಕಿನ ಗಂಗಮ್ಮ ಎಲ್ಲ ಕೊರತೆಗಳನ್ನು ಮೆಟ್ಟಿ ನಿಂತು ತನ್ನ ತಂದೆ-ತಾಯಿಗಳು ನಿರಂತರ ಖುಷಿ ಪಡುವ, ತಮ್ಮ ಬದುಕಿನುದ್ದಕ್ಕೂ ಹೆಮ್ಮೆಯಿಂದ ಬೀಗುವ ಸಾಧನೆ ಮಾಡಿದ್ದಾಳೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21 ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಗಂಗಮ್ಮ ಪಡೆದಿರುವ ಅಂಕಗಳು ಎಷ್ಟು ಗೊತ್ತಾ? 625/625! ಶತ ಪ್ರತಿಶತ, ಸೆಂಟ್ ಪರ್ಸೆಂಟ್! ಅವಳ ಸಾಧನೆ ಯಾಕೆ ಮಹತ್ಪಪೂರ್ಣ ಮತ್ತು ಅಸಾಮಾನ್ಯವೆನಿಸುತ್ತದೆ ಎಂದರೆ, ಆಕೆ ಉಳಿದವಂತೆ ಆರೋಗ್ಯ ಮತ್ತು ಸಾಮಾನ್ಯವಾಗಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಬಂದಿಲ್ಲ. ಗಂಗಮ್ಮ ಹೃದ್ರೋಗದಿಂದ ಬಳಲುತ್ತಿದ್ದಾಳೆ ಮತ್ತು ಅದರಿಂದ ಸದಾ ತೊಂದರೆ ಅನುಭವಿಸುತ್ತಲೇ ಇರುತ್ತಾಳೆ. ಈ ಪೀಡೆ ಅವಳನ್ನು ಪರೀಕ್ಷೆಯ ಸಂದರ್ಭದಲ್ಲೂ ಕಾಡಿತು.