Breaking News
Home / ರಾಜಕೀಯ / ಚಿತ್ರತಂಡದ ಮೇಲೆ ನಾಯಕ ಅಜಯ್ ರಾವ್ ಗಂಭೀರ ಆರೋಪ: ನ್ಯಾಯ ಸಿಗುವವರೆಗೂ ಶೂಟಿಂಗ್‌ಗೆ ಹೋಗದಿರಲು ನಿರ್ಧಾರ

ಚಿತ್ರತಂಡದ ಮೇಲೆ ನಾಯಕ ಅಜಯ್ ರಾವ್ ಗಂಭೀರ ಆರೋಪ: ನ್ಯಾಯ ಸಿಗುವವರೆಗೂ ಶೂಟಿಂಗ್‌ಗೆ ಹೋಗದಿರಲು ನಿರ್ಧಾರ

Spread the love

ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ನಾಯಕನಾಗಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ ಸಿನಿಮಾ ಲವ್ ಯೂ ರಚ್ಚು. ಇಂದು ಬಿಡದಿಯಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿ ವಿವೇಕ್ ಎಂಬ ಸಾಹಸ ಕಲಾವಿದ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕ ಕೃಷ್ಣ ಅಜಯ್ ರಾವ್, ವಿವೇಕ್ ಸಾವಿಗೆ ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ಚಿತ್ರೀಕರಣಕ್ಕೆ ಹೋಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ.

2017ರ ನವೆಂಬರ್ ತಿಂಗಳಲ್ಲಿ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಉದಯ್ ಮತ್ತು ಅನಿಲ್ ಎಂಬ ಇಬ್ಬರು ಉದಯೋನ್ಮುಖ ಪ್ರತಿಭಾನ್ವಿತ ಕಲಾವಿದರು ಚಿತ್ರತಂಡದ ಅಜಾಗರೂಕತೆಯಿಂದ ಬಲಿಯಾದ ಘಟನೆ ಇನ್ನೂ ಹಸಿರಾಗಿಯೇ ಇದೆ. ಅದಾಗಿ ಎರಡು ವರ್ಷಗಳಲ್ಲೇ ಅರ್ಥಾತ್ 2019ರ ಮಾರ್ಚ್ನಲ್ಲಿ ವೀರಂ ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸಿಡಿದು ಸಿನಿಮಾ ಶೂಟಿಂಗ್ ನೋಡಲು ಬಂದಿದ್ದ ಇಬ್ಬರು ಬಲಿಯಾಗಿದ್ದೂ ಗೊತ್ತೇಯಿದೆ. ಇಂತಹ ದುರ್ಘಟನೆಗಳ ನಡುವೆಯೂ ಆಗೊಮ್ಮೆ ಈಗೊಮ್ಮೆ ಫೈಟ್ ಸೀನ್‌ಗಳು, ಸ್ಟಂಟ್ ದೃಶ್ಯಗಳ ಚಿತ್ರೀಕರಣದ ವೇಳೆ ನಟರಿಗೆ, ಸಾಹಸ ಕಲಾವಿದರಿಗೆ ಪೆಟ್ಟಾದ ಕೆಲ ಘಟನೆಗಳು ನಡೆದಿವೆ.

 

ಸಾಹಸ ಕಲಾವಿದ ವಿವೇಕ್​ ಸಾವಿನ ಪ್ರಕರಣದಲ್ಲಿ ನಾಲ್ವರು ಪೊಲೀಸರ ವಶಕ್ಕೆ

ಆದರೆ, ಮಾಸ್ತಿಗುಡಿ ಹಾಗೂ ವೀರಂ ದುರ್ಘಟನೆಗಳ ಬಳಿಕ ಬಹುತೇಕ ಚಿತ್ರತಂಡಗಳು ಸಾಕಷ್ಟು ಎಚ್ಚರಿಕೆ ವಹಿಸಿವೆ. ಆದರೂ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೇ ದುಸ್ಸಾಹಸಕ್ಕೆ ಕೈಹಾಕುವ ಘಟನೆಗಳೂ ನಡೆಯುತ್ತಿವೆ. ಅದಕ್ಕೆ ಉದಾಹರಣೆ ಲವ್ ಯೂ ರಚ್ಚು ಚಿತ್ರತಂಡ.

ಹೌದು, ಘಟನೆ ಸಂಬಂಧ ಖುದ್ದು ಲವ್ ಯೂ ರಚ್ಚು ಚಿತ್ರದ ನಾಯಕ ನಟ ಅಜಯ್ ರಾವ್ ತಮ್ಮದೇ ಚಿತ್ರತಂಡದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುತ್ತಾ, `ಮೆಟಲ್ ರೋಪ್ ಬಳಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಈ ಸೀನ್ ಶೂಟಿಂಗ್ ವೇಳೆ ನಾನು ಅಲ್ಲಿರಲಿಲ್ಲ. ಹಾಗೇನಾದರೂ ನಾನು ಸ್ಥಳದಲ್ಲಿ ಇದ್ದಿದ್ದರೆ ಖಂಡಿತವಾಗಿಯೂ ಎಚ್ಚರಿಕೆ ವಹಿಸುವಂತೆ ಹೇಳುತ್ತಿದ್ದೆ. ಮೆಟಲ್ ರೋಪ್ ಎಳೆಯುತ್ತಿದ್ದ ವಿವೇಕ್‌ಗೆ ಹಾಗೂ ಜಾಕೆಟ್ ಹಾಕಿದ್ದ ಮತ್ತೊಬ್ಬರಿಗೆ ವಿದ್ಯುತ್ ಶಾಕ್ ಹೊಡೆದಿದೆ. ನಾನು ಯಾವಾಗಲೂ ಮುಂಜಾಗ್ರತೆ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ. ನಾವು ಏನಾದರೂ ಹೇಳಲು ಹೋದರೆ, ಎಲ್ಲದರಲ್ಲೂ ಮೂಗು ತೂರಿಸುತ್ತಾರೆ ಎಂದು ದೂರುತ್ತಾರೆ. ಇತ್ತೀಚೆಗಷ್ಟೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೆ. ಚಿತ್ರದ ಬಗ್ಗೆ ಏನಾದರೂ ಪ್ರಶ್ನಿಸಲು ಹೋದರೆ ನಾವೇ ಕೆಟ್ಟವರಾಗಿಬಿಡುತ್ತೇವೆ. ಇದರಿಂದಾಗಿ ನನಗೂ ತುಂಬ ಬೇಸರವಾಗಿದೆ. ಮೃತ ವಿವೇಕ್‌ಗೆ ನ್ಯಾಯ ಸಿಗುವವರೆಗೂ ನಾನು ಶೂಟಿಂಗ್‌ಗೆ ಹೋಗದಿರಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.

ಇನ್ನು ಮೃತ ವಿವೇಕ್ ಕುಟುಂಬದವರು ಇನ್ನೂ ದೂರು ನೀಡಿಲ್ಲ. ಬಿಡದಿ ಪೊಲೀಸ್ ಠಾಣೆಗೆ ತೆರಳಿ ಇಂದು ದೂರು ನೀಡಲಿದ್ದಾರೆ. ಹೀಗಾಗಿಯೇ ವೈದ್ಯರು ನಾಳೆ ಬೆಳಗ್ಗೆ ವಿವೇಕ್ ಮರಣೋತ್ತರ ಪರೀಕ್ಷೆ ಮಾಡಲಿದ್ದಾರೆ. ಮರಣೋತ್ತರ ಬಳಿಕ ವೈದ್ಯರು ಮೃತದೇಹವನ್ನು ವಿವೇಕ್ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ. ಪ್ರಕರಣ ಸಂಬಂಧ ಬಿಡದಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಚಿತ್ರದ ನಿರ್ದೇಶಕ ಶಂಕರ್ ರಾಜು, ಸ್ಟಂಟ್ ಮಾಸ್ಟರ್ ವಿನೋದ್, ಜಮೀನು ಮಾಲೀಕ ಪುಟ್ಟರಾಜು ಹಾಗೂ ಕ್ರೇನ್ ಚಾಲಕ ಮುನಿಯಪ್ಪರನ್ನು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ