ನವದೆಹಲಿ: ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ಇಂಡೋ-ಪಾಕ್ ಕ್ರಿಕೆಟ್ ಬಗ್ಗೆ ನಿಲುವನ್ನು ಪುನರುಚ್ಚರಿಸಿದ್ದಾರೆ.
ಇಂಡೋ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಉಭಯ ದೇಶಗಳ ನಡುವಿನ ರಾಜಕೀಯ, ಗಡಿ ಸಂಬಂಧದಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಆಡುವ ಯಾವುದೇ ಅವಕಾಶವಿಲ್ಲ. ಹಾಗಿದ್ದರೂ ಅಭಿಮಾನಿಗಳು ಐಸಿಸಿ ನಡೆಸುವ ಏಕದಿನ, ಟಿ20 ಎರಡೂ ಮಾದರಿಯ ವಿಶ್ವಕಪ್ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕ್ ನಡುವ ಪಂದ್ಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.
ಕೋವಿಡ್-19 ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಭಾರೀ ಹೊಡೆತ ಕೊಟ್ಟಿದೆ. ಹೀಗಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಹಣವನ್ನು ಸಂಗ್ರಹಿಸಲು ಇಂಡೋ-ಪಾಕ್ ಸರಣಿಯನ್ನು ಪ್ರಸ್ತಾಪಿಸಿದ್ದರು. ಆದರೆ ಕಪಿಲ್ ದೇವ್ ಅವರು ನಮಗೆ ಹಣದ ಅವಶ್ಯಕತೆ ಇಲ್ಲ. ನಾವು ಏಕೆ ಕ್ರಿಕೆಟಿಗರ ಜೀವನವನ್ನು ಅಪಾಯಕ್ಕೆ ದೂಡಬೇಕು ಎಂದು ಈ ಹಿಂದೆ ತಿರುಗೇಟು ನೀಡಿದ್ದರು.