ಬಾಗಲಕೋಟೆ,: ಪತ್ರಿಕೋದ್ಯಮವೆಂದರೆ ಕೇವಲ ಒಂದು ವೃತ್ತಿಯಲ್ಲ, ಅದು ಸಮಾಜದತ್ತ ಇರುವ ಪವಿತ್ರ ಜವಾಬ್ದಾರಿಯಾಗಿದೆ. ಸತ್ಯವನ್ನು ಹುಡುಕುವ ಧೈರ್ಯ, ಜನರ ಧ್ವನಿಯಾಗುವ ಬದ್ಧತೆ ಹಾಗೂ ಇತಿಹಾಸವನ್ನು ದಾಖಲಿಸುವ ಹೊಣೆಗಾರಿಕೆಯೇ ಪತ್ರಿಕೋದ್ಯಮದ ನಿಜವಾದ ಮೌಲ್ಯಗಳಾಗಿವೆ ಎಂದು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗನ್ನಾಥ ಚವ್ಹಾಣ ಹೇಳಿದರು.
ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಆಶ್ರಯದಲ್ಲಿ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸತ್ಯವನ್ನು ದಾಖಲಿಸಲು ಸಂಕಷ್ಟಗಳನ್ನು ಲೆಕ್ಕಿಸದೆ ಮೈದಾನಕ್ಕಿಳಿಯುವ ಪತ್ರಕರ್ತರು ಜನರ ಬದುಕಿನ ಕಥೆಗಳನ್ನು ಜಗತ್ತಿನ ಮುಂದೆ ತರುತ್ತಾರೆ. ಪತ್ರಕರ್ತರ ಪ್ರತಿಯೊಂದು ಬರಹ, ಛಾಯಾಚಿತ್ರ ಹಾಗೂ ವರದಿ ಕಾಲದ ಸಾಕ್ಷಿಯಾಗಿ ಉಳಿಯುತ್ತದೆ. ಸುದ್ದಿಗಳು ಕಾಲಕ್ರಮೇಣ ಹಳೆಯದಾಗಬಹುದು, ಆದರೆ ನಿಷ್ಠೆಯಿಂದ ಮಾಡಿದ ಪತ್ರಿಕೋದ್ಯಮ ಇತಿಹಾಸವಾಗಿ ಶಾಶ್ವತವಾಗಿರುತ್ತದೆ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳ ಓದಿನಿಂದ ಸಾಮಾಜಿಕ ಅರಿವು, ಸಾಮಾನ್ಯ ಜ್ಞಾನ ಹಾಗೂ ಸಮಕಾಲೀನ ವಿದ್ಯಮಾನಗಳ ಬಗ್ಗೆ ತಿಳುವಳಿಕೆ ವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಮೂಲಕ ಕನ್ನಡ ಪತ್ರಿಕಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕರಾದ ಜಿ.ಎಂ. ನಾವದಗಿ, ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ. ಎಂ. ನಂಜುಂಡಸ್ವಾಮಿ, ಕಾರ್ಯದರ್ಶಿ ಬಸವರಾಜ ವಿ. ಖೋತ, ಬಿಬಿಎ ವಿಭಾಗದ ಮುಖ್ಯಸ್ಥೆ ನಂದಿನಿ ದೊಡ್ಡಮನಿ, ಪಿಯುಸಿ ವಿಭಾಗದ ಉಪನ್ಯಾಸಕಿ ಸಂಗೀತ ಗರಗದಮಠ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7