ಮೈಸೂರು: ಜಿಲ್ಲೆಯ ಜ್ಯೂಬಿಲಿಯೆಂಟ್ ಔಷಧಿ ತಯಾರಿಕಾ ಘಟಕದಿಂದ ಕೊರೊನಾ ಸೋಂಕು ಹೇಗೆ ಹರಡಿತು. ಇದರ ಮೂಲ ಯಾವುದು ಎಂಬುದರ ಕುರಿತು ಪೊಲೀಸರು ತಲೆಕೆಡಿಸಿಕೊಂಡಿದ್ದು, ಸೋಂಕಿನ ರಹಸ್ಯ ಬೇಧಿಸಲು ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿದೆ.
ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಮೂವರು ಇನ್ಸ್ ಪೆಕ್ಟರ್ ಗಳನ್ನು ಒಳಗೊಂಡ ತಂಡ ಸದ್ಯ ರೋಗಿ ನಂ.52ಕ್ಕೆ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದು, ರೋಗಿಯ ಪತ್ನಿ, ಮಾವನನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಜ್ಯೂಬಿಲಿಯೆಂಟ್ ಕಂಪನಿಯ ಕಾರ್ಯವೈಖರಿ, ಉತ್ಪನ್ನಗಳ ಪ್ಯಾಕಿಂಗ್, ವಿಲೇವಾರಿ, ಸುರಕ್ಷತಾ ಕ್ರಮ, ಲ್ಯಾಬರೋಟರಿ ಪ್ರಕ್ರಿಯೆಗಳ ಬಗ್ಗೆ ತನಿಖಾ ತಂಡ ಮಾಹಿತಿ ಕಲೆ ಹಾಕಲಿದೆ.
ರೋಗಿ ನಂ.52 ಅವರ ಕಳೆದ ಒಂದೂವರೆ ತಿಂಗಳ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ. ಟ್ರಾವೆಲ್ ಹಿಸ್ಟರಿ, ಮೊಬೈಲ್ ಕರೆಗಳ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದೆ. ಶತಾಯಗತಾಯ ಮೈಸೂರಿನಲ್ಲಿ ಕೊರೊನಾ ವೈರಸ್ ಮೂಲ ಪತ್ತೆ ಹಚ್ಚಲೇಬೇಕೆಂದು ಪೊಲೀಸರು ಪಣ ತೊಟ್ಟಿದ್ದಾರೆ.