Breaking News
Home / ಜಿಲ್ಲೆ / ಸಂಭವನೀಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಲೆಕ್ಕಾಚಾರ

ಸಂಭವನೀಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಲೆಕ್ಕಾಚಾರ

Spread the love

ಬೆಂಗಳೂರು, ಫೆ.12- ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತಿನಿಂದ ಹೊರ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇದೀಗ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡುವುದು ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ರಾಜಧಾನಿ ಬೆಂಗಳೂರು, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಿಗೆ ಉಸ್ತುವಾರಿ ವಹಿಸಿಕೊಳ್ಳಲು ಆಡಳಿತಾರೂಢ ಬಿಜೆಪಿಯಲ್ಲಿ ಪೈಪೋಟಿಯೇ ಆರಂಭವಾಗಿದೆ. ಇದು ಯಡಿಯೂರಪ್ಪನವರಿಗೆ ಮತ್ತೊಂದು ಸುತ್ತಿನ ಬಿಕ್ಕಟ್ಟು ತರುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ನಿರೀಕ್ಷಿತ ಖಾತೆಗಳು ಸಿಕ್ಕಿಲ್ಲ ಎಂದು ಮುನಿಸಿಕೊಂಡಿದ್ದ ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿ ಬಿಕ್ಕಟ್ಟು ಶಮನಕ್ಕೆ ಕೈ ಹಾಕಿದ್ದರು. ಇದೀಗ ಯಾವ ಯಾವ ಸಚಿವರಿಗೆ ಯಾವ ಯಾವ ಜಿಲ್ಲೆಗಳ ಉಸ್ತುವಾರಿಯನ್ನು ನೀಡಬೇಕು ಎಂಬುದು ಕಗ್ಗಟ್ಟಾಂಗಿ ಪರಿಣಮಿಸಿದೆ.  ಸಂಪುಟ ವಿಸ್ತರಣೆಯಾಗಿ ನಾಲ್ಕು ದಿನಗಳ ನಂತರ ಖಾತೆಗಳನ್ನು ನೀಡಲಾಗಿತ್ತು. ಇದೀಗ ಖಾತೆ ಹಂಚಿಕೆಯಾಗಿ ಎರಡು ದಿನಗಳಾದರು ಜಿಲ್ಲಾ ಉಸ್ತುವಾರಿ ಘೋಷಣೆಯಾಗಿಲ್ಲ.

ಮುಖ್ಯಮಂತ್ರಿ ಮೇಲೆ ಸಾಕಷ್ಟು ಒತ್ತಡ ಹಾಕಿ ಜಲಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿರುವ ರಮೇಶ್ ಜಾರಕಿಹೊಳಿ ತಮಗೆ ಬೆಳಗಾವಿ ಜಿಲ್ಲೆ ಉಸ್ತುವಾರಿ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಮೂರು ದಿನಗಳ ಹಿಂದೆ ಸಿಎಂ ನಿವಾಸದಲ್ಲಿ ನಡೆದ ಮಾತುಕತೆ ವೇಳೆ ನನಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಿಲ್ಲ. ಕಡೆ ಪಕ್ಷ ಜಲಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಆದರೆ, ಬೆಳಗಾವಿ ಜಿಲ್ಲೆಯನ್ನು ರಮೇಶ್ ಜಾರಕಿಹೊಳಿ ಉಸ್ತುವಾರಿ ನೀಡಿದರೆ ಬಿಕ್ಕಟ್ಟು ಸೃಷ್ಟಿಯಾಗಬಹುದೆಂಬ ಆತಂಕ ಯಡಿಯೂರಪ್ಪನವರನ್ನು ಕಾಡುತ್ತಿದೆ. ಏಕೆಂದರೆ ಮಾಜಿ ಸಚಿವ ಉಮೇಶ್ ಕತ್ತಿ ಸಂಪುಟಕ್ಕೆ ಸೇರ್ಪಡೆಯಾದರೆ ಅವರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಜತೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೂಡ ತಮ್ಮ ತವರು ಜಿಲ್ಲೆಯ ಮೇಲೆ ಕಣ್ಣಿಟ್ಟು ಕೂತಿದ್ದಾರೆ.

ಉಮೇಶ್ ಕತ್ತಿ ತಮ್ಮನ್ನು ಸಂಪುಟದಿಂದ ದೂರ ಇಟ್ಟಿರುವುದಕ್ಕೆ ಮುನಿಸಿಕೊಂಡಿದ್ದಾರೆ. ಒಂದು ವೇಳೆ ನಾಳೆ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾದ ನಂತರ ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೀಡದಿದ್ದರೆ ಅಸಮಾಧಾನ ಭುಗಿಲೇಳಬಹುದೆಂಬ ಭೀತಿ ಸಿಎಂಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸದ್ಯ ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದಾರೆ. ನನಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ಕೊಡಲಿಲ್ಲ. ಕಡೆ ಪಕ್ಷ ತವರು ಜಿಲ್ಲೆಯ ಉಸ್ತುವಾರಿ ನೀಡದಿದ್ದರೆ ಹೇಗೆ ಎಂಬ ಪ್ರಶ್ನೆಯನ್ನು ಸಚಿವ ಶ್ರೀರಾಮುಲು ಯಡಿಯೂರಪ್ಪನವರ ಮುಂದೆ ಇಟ್ಟಿದ್ದಾರೆ.

ಈ ಹಿಂದೆಯೇ ಶ್ರೀರಾಮುಲು ಬಳ್ಳಾರಿ ಜಿಲ್ಲೆ ಉಸ್ತುವಾರಿ ನೀಡಬೇಕೆಂದು ಕೇಳಿದ್ದರು. ಆದರೆ, ಶ್ರೀರಾಮುಲುಗೆ ಚಿತ್ರದುರ್ಗ ಜಿಲ್ಲಾ ಹೊಣೆಗಾರಿಕೆಯನ್ನು ನೀಡಲಾಗಿದೆ.
ಇದೀಗ ಬಿಎಸ್‍ವೈ ಸಂಪುಟಕ್ಕೆ ಆನಂದ್‍ಸಿಂಗ್ ಸೇರ್ಪಡೆಯಾಗಿದ್ದಾರೆ. ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬ ಬೇಡಿಕೆಗೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕಡೆ ಪಕ್ಷ ಬಳ್ಳಾರಿ ಉಸ್ತುವಾರಿಯನ್ನಾದರೂ ನೀಡಬೇಕು ಎನ್ನುವುದು ಅವರ ಬೇಡಿಕೆಯಾಗಿದೆ.

ಒಂದು ವೇಳೆ ಆನಂದ್‍ಸಿಂಗ್‍ಗೆ ಬಳ್ಳಾರಿ ಉಸ್ತುವಾರಿ ನೀಡಿದರೆ ಶ್ರೀರಾಮುಲು ಮುನಿಸಿಕೊಳ್ಳುತ್ತಾರೆ. ಹಾಲಿ ಬಳ್ಳಾರಿ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಬೆಳಗಾವಿ ಕೈ ತಪ್ಪಿದರೆ ಅವರೂ ಕೂಡ ಮುನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.  ಇನ್ನು ರಾಜಧಾನಿ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಕಂದಾಯ ಸಚಿವ ಆರ್.ಅಶೋಕ್, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಕಣ್ಣಿಟ್ಟಿದ್ದಾರೆ.

ಈ ಐದು ಮಂದಿ ಸಚಿವರು ರಾಜಧಾನಿ ಮೇಲೆ ಪರೋಕ್ಷವಾಗಿ ಹಿಡಿತ ಸಾಧಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಯಾರಿಗೇ ಉಸ್ತುವಾರಿ ನೀಡಿದರೂ ಅಸಮಾಧಾನಗೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ನೀಡದೆ ಮುಖ್ಯಮಂತ್ರಿ ತಮ್ಮ ಬಳಿಯೇ ಉಳಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಉಳಿದಂತೆ ಕೆಲವು ಜಿಲ್ಲೆಗಳಲ್ಲಿ ಉಸ್ತುವಾರಿಗೆ ತೀರ ಹೇಳಿಕೊಳ್ಳುವಂತ ಪೈಪೋಟಿ ಇಲ್ಲ. ಎರಡೆರಡು ಜಿಲ್ಲೆಗಳ ಉಸ್ತುವಾರಿ ಹೊಂದಿರುವ ಸಚಿವರನ್ನು ಒಂದೇ ಜಿಲ್ಲೆಗೆ ಸೀಮಿತಗೊಳಿಸಿ ನೂತನ ಸಚಿವರಿಗೆ ಉಸ್ತುವಾರಿ ಜವಾಬ್ದಾರಿ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಲೆಕ್ಕಾಚಾರ ಹಾಕಿದ್ದಾರೆ.

ಸಂಭವನೀಯ ಜಿಲ್ಲಾ ಉಸ್ತುವಾರಿ:
1. ಬಿ.ಎಸ್.ಯಡಿಯೂರುಪ್ಪ (ಮುಖ್ಯಮಂತ್ರಿ)-ಬೆಂಗಳೂರು
2. ಆರ್.ಅಶೋಕ್ (ಕಂದಾಯ)- ಬೆಂಗಳೂರು ನಗರ/ಗ್ರಾಮಾಂತರ
3. ಡಾ.ಅಶ್ವತ್ಥನಾರಾಯಣ (ಡಿಸಿಎಂ) -ರಾಮನಗರ
4. ಡಾ.ಕೆ.ಸುಧಾಕರ್ (ವೈದ್ಯಕೀಯ) -ಚಿಕ್ಕಬಳ್ಳಾಪುರ
5. ಎಚ್.ನಾಗೇಶ್ (ಅಬಕಾರಿ) – ಕೋಲಾರ
6. ಕೆ.ಸಿ.ನಾರಾಯಣಗೌಡ (ತೋಟಗಾರಿಕೆ -ಪೌರಾಡಳಿತ ) -ಮಂಡ್ಯ
7. ವಿ.ಸೋಮಣ್ಣ (ವಸತಿ) – ಮೈಸೂರು
8. ರಮೇಶ್ ಜಾರಕಿಹೊಳೆ (ಜಲಸಂಪನ್ಮೂಲ) – ಬೆಳಗಾವಿ
9. ಜಗದೀಶ್ ಶೆಟ್ಟರ್ (ಬೃಹತ್ ಮತ್ತು ಮಧ್ಯಮ ಕೈಗಾರಿಕ) – ಧಾರವಾಡ
10. ಬಸವರಾಜ ಬೊಮ್ಮಾಯಿ (ಗೃಹ) -ಹಾವೇರಿ
11. ಬಿ.ಸಿ.ಪಾಟೀಲ್ ( ಕೃಷಿ) – ದಾವಣಗೆರೆ
12. ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್) -ಶಿವಮೊಗ್ಗ
13. ಎಸ್.ಸುರೇಶ್‍ಕುಮಾರ್ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ) – ಚಾಮರಾಜನಗರ
14. ಕೆ.ಗೋಪಾಲಯ್ಯ (ಆಹಾರ ಮತ್ತು ನಾಗರೀಕ ಪೂರೈಕೆ ) – ಮಡಿಕೇರಿ
15. ಸಿ.ಟಿ.ರವಿ ( ಕನ್ನಡ ಮತ್ತು ಸಂಸ್ಕøತಿ ಇಲಾಖೆ )- ಚಿಕ್ಕಮಗಳೂರು
16. ಕೋಟ ಶ್ರೀನಿವಾಸ ಪೂಜಾರಿ ( ಮುಜರಾಯಿ, ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ) -ದಕ್ಷಿಣ ಕನ್ನಡ
17. ಜೆ.ಸಿ.ಮಾಧುಸ್ವಾಮಿ ( ಕಾನೂನು , ಸಂಸದೀಯ ವ್ಯವಹಾರ, ಸಣ್ಣ ನೀರಾವರಿ)- ತುಮಕೂರು
18. ಸಿ.ಸಿ.ಪಾಟೀಲ್ ( ಗಣಿ ಮತ್ತು ಭೂ ವಿಜ್ಞಾನ )- ಗದಗ
19. ಪ್ರಭು ಚೌವ್ಹಾಣ್ ( ಪಶುಸಂಗೋಪನೆ ) -ಬೀದರ್
20. ಶಶಿಕಲಾ ಜೊಲ್ಲೆ ( ಮಹಿಳಾ ಮತ್ತು ಮಕ್ಕಳ ಕಲ್ಯಾಭಿವೃದ್ಧಿ) – ರಾಯಚೂರು
21. ಎಸ್.ಟಿ. ಸೋಮಶೇಖರ್ (ಸಹಕಾರ )-ಹಾಸನ
22. ಬೈರತಿ ಬಸವರಾಜು (ನಗರಾಭಿವೃದ್ಧಿ) – ಕೊಪ್ಪಳ
23. ಡಾ.ಸುಧಾಕರ್ (ವೈದ್ಯಕೀಯ ಶಿಕ್ಷಣ) – ಚಿಕ್ಕಬಳ್ಳಾಪುರ
24. ಶಿವರಾಮ್ ಹೆಬ್ಬಾರ್ (ಕಾರ್ಮಿಕ ಮತ್ತು ಸಕ್ಕರೆ) – ಉತ್ತರ ಕನ್ನಡ
25. ಶ್ರೀಮಂತ ಪಾಟೀಲ್ (ಜವಳಿ/ ಅಲ್ಪಸಂಖ್ಯಾತ ಕಲ್ಯಾಣ) – ವಿಜಯಪುರ
26. ಆನಂದ್ ಸಿಂಗ್ (ಅರಣ್ಯ/ಜೈವಿಕ ಪರಿಸರ ) -ಬಳ್ಳಾರಿ
27. ಶ್ರೀರಾಮುಲು (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ) – ಚಿತ್ರದುರ್ಗ
28. ಲಕ್ಷ್ಮಣ ಸವದಿ ( ಡಿಸಿಎಂ/ ಸಾರಿಗೆ) –


Spread the love

About Laxminews 24x7

Check Also

ಅಪ್ಪ ಮಕ್ಕಳ ಶಿಕಾರಿ ನಾನು ಮಾಡುತ್ತೇನೆ; ಈಶ್ವರಪ್ಪ ಕಿಡಿ

Spread the love ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ, ಇಂದು ಪಕ್ಷೇತರ ಅಭ್ಯರ್ಥಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ