ಚಂಡೀಗಢ: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ 220 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ.
21 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಂತರ ಬುಧವಾರ ಮುಂಜಾನೆ ಬಾಲಕನನ್ನು ಕೊಳವೆ ಬಾವಿಯಿಂದ ಹೊರತೆಗೆಯಲಾಯಿತು. ಆದರೆ, ದುರದೃಷ್ಟವಶಾತ್ ಬಾಲಕ ಕೊನೆಯುಸಿರೆಳೆದಿದ್ದಾನೆ.
ಮಂಗಳವಾರ ಬೆಳಗ್ಗೆ ಪ್ರಾರಂಭವಾದ ಬಹು-ಏಜೆನ್ಸಿ ಕಾರ್ಯಾಚರಣೆಯ ನಂತರ ಬಾಲಕ ನಿರ್ವೈರ್ ಸಿಂಗ್ನನ್ನು ಮುಂಜಾನೆ 3:40 ರ ಸುಮಾರಿಗೆ ಕೊಳವೆ ಬಾವಿಯಿಂದ ಹೊರತೆಗೆದು, ತಕ್ಷಣವೇ ಅಂಬುಲೆನ್ಸ್ನಲ್ಲಿ ಅಂಬಾಲಾ ಕಂಟೋನ್ಮೆಂಟ್ನಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವನ್ನು ತುರ್ತು ನಿಗಾ ಘಟಕಕ್ಕೆ ಸಾಗಿಸುವಾಗ ಮೃತಪಟ್ಟಿದ್ದಾನೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ನಿರ್ವೈರ್ ತನ್ನ ತಂದೆ ಮಂಜಿತ್ ಜೊತೆ ತಾತನಿಗೆ ಊಟ ಕೊಡಲು ಹೊಲಕ್ಕೆ ಹೋಗಿದ್ದ. ಮಂಗಳವಾರ ಬೆಳಗ್ಗೆ 6:30 ರ ಸುಮಾರಿಗೆ ಅಂಬಾಲಾ ಜಿಲ್ಲೆಯ ಧನಿಯೋರಾ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಾಲಕ ಬಿದ್ದಿದ್ದ.
Laxmi News 24×7