ಗೋಕಾಕ: ರೈತರು ಬೆಳೆದ ತರಕಾರಿಗಳನ್ನು ಮತ್ತು ಬೆಳೆಗಳನ್ನು ಸರ್ಕಾರವೆ ನೇರವಾಗಿ ತೆಗೆದುಕೊಂಡು ಜನರಿಗೆ ವಿತರಿಸುವ ಕಾರ್ಯಕ್ಕಾಗಿ ಚಿಂತನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಲಹೆ ನೀಡಿದರು.
ಇಂದು ನಗರದಲ್ಲಿ ಮಾತನಾಡಿ ರೈತರು ಬೆಳೆದ ತರಕಾರಿಗಳು ನಾಶವಾಗುತ್ತಿವೆ. ಇದನ್ನು ಕಡಿಮೆ ದರದಲ್ಲಿ ನೀಡಲು ರೈತರು ಮುಂದಾಗಿದ್ದಾರೆ. ಇದರಿಂದ ಜನಸಾಮಾನ್ಯರಿಗೂ ಮತ್ತು ರೈತರಿಗೂ ಸ್ವಲ್ಪ ಮಟ್ಟಿಗೆ ಅನುಕೂಲ ಆಗುತ್ತದೆ ಎಂದರು.
ಕೊರೋನಾ ಸಂಕಷ್ಟದಲ್ಲಿ ಎಲ್ಲ ವರ್ಗದವರಿಗೂ ಅನಾನುಕೂಲವಾಗಿದೆ. ಹೀಗಾಗಿ ರೈತರು ಬೆಳೆದ ತರಕಾರಿಗಳನ್ನು ತೆಗೆದುಕೊಂಡು ಜನರಿಗೆ ವಿತರಿಸುವ ಕಾರ್ಯ ನಡೆಸಿದರೆ ಎಲ್ಲರಿಗೂ ಸ್ವಲ್ಪಮಟ್ಟಿಗೆ ಅನುಕೂಲವಾಗುತ್ತದೆ ಎಂದರು.
ನಮ್ಮ ಕ್ಷೇತ್ರದಿಂದಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದನ್ನು ಬೇರೆ ಕಡೆ ಮತ್ತು ಇತರೆ ರಾಜ್ಯಗಳಲ್ಲೂ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.