ಹೊಸದಿಲ್ಲಿ: ದೆಹಲಿಯಲ್ಲಿ ಮಂಗಳವಾರ ನಡೆದ ಗಲಭೆ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ಸಿಖ್ ಧ್ವಜ್ ಹಾರಿಸಿದ್ದು ಪಂಜಾಬಿ ಚಿತ್ರನಟ ಹಾಗೂ ಬಿಜೆಪಿ ಕಾರ್ಯಕರ್ತ ದೀಪ್ ಸಿಧು ಹಾಗೂ ಬೆಂಬಲಿಗರು ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ದೀಪ್ ಸಿಧು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಫೋಟೊಗಳು ಹಾಗೂ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಿಧು ತೆಗೆಸಿಕೊಂಡ ಫೋಟೊಗಳು ವೈರಲ್ ಆಗಿವೆ.
ಈ ಹಿಂದೆ ದೆಹಲಿ ಗಡಿಯಲ್ಲಿ ನಡೆದ ಪ್ರತಿಭಟನೆ ವೇಳೆ ದೀಪ್ ಸಿಧು ಪಾಲ್ಗೊಂಡಿದ್ದರು. ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ಸಿಧುನ ನಡವಳಿಕೆ ಗಮನಿಸಿ ಧರಣಿಯಿಂದ ಹೊರಗಿಟ್ಟಿದ್ದರು. ರೈತ ಸಂಘನೆಗಳು ಈತನನ್ನು ರೈತ ಹೋರಾಟದ ಶತ್ರು ಎಂದು ಕರೆದಿದ್ದು, ಈತನ ವಿರುದ್ಧ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇವರು ಚಿತ್ರನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ಬೆಂಬಲಿಗ ಸಹ ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಆರೋಪವನ್ನು ತಳ್ಳಿ ಹಾಕಿರುವ ಸಂಸದ ಸನ್ನಿ ಡಿಯೋಲ್ “ದೀಪ ಸಿಧು ಅವರೊಂದಿಗೆ ನನ್ನ ಹಾಗೂ ಕುಟುಂಬದ ಯಾರೂ ಸಹ ಸಂಬಂಧ ಹೊಂದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.