ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಲವರು ಕೆಂಪುಕೋಟೆಗೆ ನುಗ್ಗಿ ಧ್ವಜ ಹಾರಿಸಿದ್ದಾರೆ. ಇಂಥದರ ಹಿಂದೆ ಹಲವರ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ. ವೈರಿ ದೇಶಗಳು ಇಂಥದ್ದಕ್ಕೆ ಕುಮ್ಮಕ್ಕು ಕೊಡುವ ಬಗ್ಗೆ ಮಾತನಾಡುತ್ತಿವೆ. ಹಿಂಸಾಚಾರದಲ್ಲಿ ಪಾಲ್ಗೊಂಡವರು ನಿಜವಾದ ರೈತರೇ ಹೇಗೆಂಬುದು ತನಿಖೆಯಾಗಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಸಚಿವ ರಮೇಶ ಜಾರಕಿಹೊಳಿ ಬುಧವಾರ ಮಾತನಾಡಿ, ದೆಹಲಿ ಹಿಂಸಾಚಾರ ದುರದೃಷ್ಟಕರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ದೆಹಲಿ ಹಿಂಸಾಚಾರದ ಹಿಂದೆ ಹಲವರ ಕೈವಾಡ ಇರುವ ಶಂಕೆ ಇದೆ. ಭಾರತದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ಶುರುವಾಗಿದೆ. ಇಂಥದ್ದಕ್ಕೆ ವೈರಿ ದೇಶಗಳ ಕುಮ್ಮಕ್ಕು ಇರುವ ಸಾಧ್ಯತೆಯೂ ಇದೆ. ಹಿಂಸಾಚಾರದಲ್ಲಿ ಪಾಲ್ಗೊಂಡವರು ನಿಜವಾದ ರೈತರೇ ಹೇಗೆಂಬುದು ತನಿಖೆಯಾಗಲಿ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ರೈತರೊಂದಿಗೆ ಚರ್ಚೆ ನಡೆಸಲು ಸೂಚಿಸಿದೆ. ಕಾಯ್ದೆಗಳ ಬಗ್ಗೆ ಅನುಮಾನಗಳಿದ್ದರೆ ಬಗೆಹರಿಸಲು ಸಮಿತಿ ರಚಿಸಲಾಗಿದೆ. ಆದರೆ ರೈತರು ಚರ್ಚೆಗೆ ಬರುತ್ತಿಲ್ಲ. ಅಭಿಪ್ರಾಯಗಳನ್ನು ತಿಳಿಸುತ್ತಿಲ್ಲ. ಅದನ್ನು ಬಿಟ್ಟು ಕೇವಲ ಕಾಯ್ದೆಗಳನ್ನು ವಿರೋಧಿಸಿದರೆ ಹೇಗೆ? ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯುತ್ತದೆ. ಚರ್ಚೆಗೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಒಟ್ಟಿನಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತ ಕೃತ್ಯವಾಗಿದೆ. ಹಿಂಚಾಚಾರದಲ್ಲಿ ಪಾಲ್ಗೊಂಡವರು, ಕೆಂಪು ಕೋಟೆಗೆ ನುಗ್ಗಿದವರು ನಿಜವಾದ ರೈತರು ಹೌದೋ, ಅಲ್ಲವೋ ಎಂಬ ಬಗ್ಗೆಯೇ ಅನುಮಾನಗಳಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು.