ಧಾರವಾಡ: ಕೊರೊನಾ ಭೀತಿಯಿಂದ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೇರಿದಂತೆ ಕರ್ತವ್ಯದ ಮಧ್ಯೆಯೂ ಅನೇಕ ಪೊಲೀಸರು ಊಟ ಹಾಕಿ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗದಿಂದ ರಾಜಸ್ಥಾನಕ್ಕೆ ನಡೆದುಕೊಂಡೇ ಹೊರಟಿದ್ದ ಅನೇಕ ಕಾರ್ಮಿಕರು ಹಾಗೂ ಕಾರಿನಲ್ಲಿ ಹೊರಟಿದ್ದ ರಾಜಸ್ಥಾನ ಮೂಲದ ಕುಟುಂಬಗಳಿಗೆ ತೆಗೂರ ಬಳಿ ಖುದ್ದು ಎಸ್ಪಿಯೇ ಊಟ ಬಡಿಸಿ ಎಲ್ಲರ ಉಪಚಾರ ಮಾಡಿದರು. ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಟೋಲ್ ಗೇಟ್ನಲ್ಲಿ ಕೂಲಿ ಕಾರ್ಮಿಕರಿಗೆ ಖಾಕಿ ಪಡೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಿದ್ದರು.
ಧಾರವಾಡದ ಹೊರವಲಯದ ನರೇಂದ್ರ ಕ್ರಾಸ್ ಬಳಿ ಇರುವ ಟೋಲ್ ಗೇಟ್ನಲ್ಲಿ ಡಿವೈಎಸ್ಪಿ, ಪಿಎಸ್ಐ ಅವರಿಂದ ನೂರಾರು ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಬಳಿಕ ಅವರನ್ನು ಸ್ಥಳೀಯ ಹಾಸ್ಟೇಲ್ನಲ್ಲಿ ಆಶ್ರಯಕ್ಕಾಗಿ ಕಳುಹಿಸಲಾಗಿದೆ. ಕಳೆದ 5 ದಿನಗಳ ಹಿಂದೆಯೇ ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಹೊರಟ 30 ಜನರ ತಂಡ, ಬಿಸಿಲಿನಿಂದ ತೊಂದರೆ ಅನುಭವಿಸುತ್ತಿತ್ತು. ಅವರನ್ನು ಪೊಲೀಸ್ ವಾಹನದಲ್ಲಿ ತೆಗೂರ ಬಳಿ ಕರೆಸಿ ಎಸ್ಪಿ ಅವರು ಊಟ ಬಡಿಸಿದ್ದಾರೆ.
ರಾಜಸ್ಥಾನಕ್ಕೆ ಹೋಗಲು ಚೆನ್ನೈದಿಂದ ಬಂದ ಎರಡು ಕುಟುಂಬ ಎರಡು ದಿನಗಳಿಂದ ಹೋಗೋಕೆ ಆಗದೇ ರಸ್ತೆಯಲ್ಲೇ ಪರದಾಟ ಮಾಡಿತ್ತು. ಇದರ ಜೊತೆಗೆ ಬೆಳಗಾವಿಯ ಸಂಕೇಶ್ವರದಿಂದ ಬೆಂಗಳೂರ ಕಡೆ ಹೊರಟಿದ್ದ 30 ಜನರನ್ನ ಚೆಕ್ಪೋಸ್ಟನಲ್ಲಿ ತಡೆದು ಅವರಿಗೂ ಕೂಡ ಊಟಕ್ಕೆ ಹಾಕಲಾಗಿದೆ. ಆದರೆ ಬೇರೆ ಜಿಲ್ಲೆಗಳಿಂದ ಬಂದವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ಇಲ್ಲದ ಕಾರಣ ಗಡಿಯಲ್ಲೇ ಅವರನ್ನ ನಿಲ್ಲಿಸಲಾಗುತ್ತಿದೆ. ಸದ್ಯ ಎಸ್ಪಿ ವರ್ತಿಕಾ ಕಟಿಯಾರ್ ಈ ಜನರಿಗೆ ಒಂದು ಕಡೆ ಉಳಿಯಲು ಜಿಲ್ಲಾಡಳಿತದ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.