ಧಾರವಾಡ: ಎರಡೂವರೆ ವರ್ಷದ ಧಾರವಾಡದ ಪುಟಾಣಿ ಬಾಲಕಿ ತನ್ನ ವಿಶಿಷ್ಟ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದ್ದಾಳೆ.
ಮೂಲತಃ ಧಾರವಾಡ ತಾಲ್ಲೂಕಿನಜೋಡಳ್ಳಿ ( ಜಿ.ಬಸವನಕೊಪ್ಪ) ಗ್ರಾಮದ ಉಮೇಶ ಮುತ್ತಗಿ, ಹಾಗೂ ಸಕ್ಕೂಬಾಯಿ ದಂಪತಿಗಳ ಮಗು ವೈಷ್ಣವಿ ಈ ಸಾಧನೆಗೈದಿದ್ದಾಳೆ.
ತನ್ನ ತೊದಲುನುಡಿಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರೀಯ ಲಾಂಛನಗಳು, ರಾಷ್ಟ್ರೀಯ ನಾಯಕರು, ಇತಿಹಾಸದ ಘಟನಾವಳಿಗಳು, ಪ್ರಾಣಿ, ಪಕ್ಷಿಗಳ ಅನುಕರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಬಾಲಕಿಯ ತಂದೆ ಉಮೇಶ ಮುತ್ತಗಿ ಉತ್ತರ ಪ್ರದೇಶದ ಮಥುರಾದಲ್ಲಿ ಭಾರತೀಯ ಸೇನೆಯ 51 ಮೀಡಿಯಂ ರೆಜಿಮೆಂಟ್ನ ಹವಾಲ್ದಾರರಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ.
ವೈಷ್ಣವಿ ಕಳೆದ ಮಾರ್ಚ್ ತಿಂಗಳಲ್ಲಿ India Book of Record’s ನಲ್ಲಿ ತನ್ನ ಪ್ರತಿಭೆಯ ಮೂಲಕ ದಾಖಲೆ ಬರೆದಿದ್ದಾಳೆ.
ವೈಷ್ಣವಿ ಸ್ಪಷ್ಟವಾಗಿ ರಾಷ್ಟ್ರ ಗೀತೆಯ, ಐದು ಸಂಸ್ಕೃತದ ಮಂತ್ರಗಳು , 170 ಇತಿಹಾಸದ ಮತ್ತು ಈಗಿನ ಶ್ರೇಷ್ಠ ನಾಯಕರ ಹೆಸರು ಹೇಳುವುದು, ಪ್ರಾಣಿಗಳ, ಪಕ್ಷಿಗಳ, ಹಣ್ಣುಗಳು, ತರಕಾರಿಗಳು, ಸೌರ ಮಂಡಲದ ಗ್ರಹಗಳ ಹೆಸರು, ಗಣಿತದ ಚಿಹ್ನೆಗಳು, ವಾರಗಳ ಹೆಸರು, ತಿಂಗಳುಗಳು, ಶರೀರದ ವಿಭಿನ್ನ ಭಾಗಗಳ ಹೆಸರುಗಳನ್ನು ನಿಖರವಾಗಿ ಹೇಳುತ್ತಾಳೆ.
ಜೊತೆಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆ, 01 ರಿಂದ 70 ರ ವರೆಗೆ ಅಂಕಿಗಳ ಗುರುತಿಸುವಿಕೆ. ಅನೇಕ ಪ್ರಾಣಿ- ಪಕ್ಷಿ ಗಳ ಧ್ವನಿಯನ್ನು ಅನುಕರಣೆ ಮಾಡಿ ತನ್ನ ಸ್ಪಷ್ಟವಾದ ವಾಕ್ ಚಾತುರ್ಯ ದಿಂದ ಎಳೆಯ ವಯಸ್ಸಿನಲ್ಲಿ ಭಾರತದಲ್ಲಿ ಈ ದಾಖಲೆ ಬರೆದಿರುವುದು ಹೆಮ್ಮೆಯ ಸಂಗತಿಯಾಗಿದೆ.