Home / ಜಿಲ್ಲೆ / ರಾಜ್ಯದ ಕ್ರಿಕೆಟ್‌ ಮಂಡಳಿಗೆ ಗಂಗೂಲಿ ಪತ್ರ – ಐಸಿಸಿ ಟಿ20 ಕ್ರಿಕೆಟ್‌ ಮುಂದೂಡಿಕೆ ಸಾಧ್ಯತೆ…….

ರಾಜ್ಯದ ಕ್ರಿಕೆಟ್‌ ಮಂಡಳಿಗೆ ಗಂಗೂಲಿ ಪತ್ರ – ಐಸಿಸಿ ಟಿ20 ಕ್ರಿಕೆಟ್‌ ಮುಂದೂಡಿಕೆ ಸಾಧ್ಯತೆ…….

Spread the love

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಕ್ರಿಕೆಟ್‌ನ್ನು ಮುಂದೂಡಲು ಐಸಿಸಿ ಚಿಂತನೆ ನಡೆಸಿದ ಬೆನ್ನಲ್ಲೇ ಬಿಸಿಸಿಐ ಐಪಿಎಲ್‌ ಆಡಿಸಲು ಮುಂದಾಗುತ್ತಿದೆ.

ಹೌದು, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ನಡೆಸುವ ಸಂಬಂಧ ರಾಜ್ಯದ ಕ್ರಿಕೆಟ್‌ ಮಂಡಳಿಗಳಿಗೆ ಪತ್ರ ಬರೆದು ನಿಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡಿದ್ದಾರೆ.

ಈ ವರ್ಷ ಐಪಿಎಲ್‌ ಆಯೋಜಿಸಲು ಬಿಸಿಸಿಐ ವಿವಿಧ ಆಯ್ಕೆಗಳನ್ನು ಹುಡುಕುತ್ತಿದೆ. ಈ ಸಂಬಂಧ ಖಾಲಿ ಸ್ಟೇಡಿಯಂನಲ್ಲೂ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಸಾರದ ಹಕ್ಕು ಪಡೆದುಕೊಂಡವರು, ಆಯೋಜಕರು ಸೇರಿದಂತೆ ಎಲ್ಲರೂ ಈ ವರ್ಷವೇ ಐಪಿಎಲ್‌ ಆಯೋಜಿಸುವ ಸಂಬಂಧ ಎದುರು ನೋಡುತ್ತಿದ್ದಾರೆ ಎಂದು ಗಂಗೂಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚಿಗೆ ಭಾರತ ಸೇರಿದಂತೆ ವಿದೇಶದ ಆಟಗಾರರು ಈ ವರ್ಷ ಐಪಿಎಲ್‌ ಆಡಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಶೀಘ್ರವೇ ಟೂರ್ನಿಯನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬಿಸಿಸಿಐ ಐಪಿಎಲ್‌ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ ವಿಶ್ವಕಪ್‌ ಆಯೋಜನೆ ಬಗ್ಗೆ ಐಸಿಸಿ ನಿರ್ಧಾರ ಸ್ಪಷ್ಟವಾಗಿರಲಿಲ್ಲ. ಬುಧವಾರ ಐಸಿಸಿಯ ಸಭೆ ನಡೆದಿತ್ತು. ಈ ವೇಳೆ ವಿಶ್ವಕಪ್‌ ಆಯೋಜನೆ ಕುರಿತು ಐಸಿಸಿಯ ನಿರ್ಧಾರ ಪ್ರಕಟವಾಗುತ್ತಿದ್ದಂತೆ ಐಪಿಎಲ್‌ ಆಯೋಜನೆ ಕುರಿತು ಸೌರವ್‌ ಗಂಗೂಲಿ ಈಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಗಂಗೂಲಿ ಇನ್ನು ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ಬಿಸಿಸಿಐ ಆಯೋಜಿಸುವ ದೇಶೀಯ ಟೂರ್ನಿಯಲ್ಲೂ ಬದಲಾವಣೆ ತರಲಾಗುವುದು ಎಂದು ಹೇಳಿದ್ದಾರೆ. ಮುಂದಿನ ದಿನದಲ್ಲಿ ಈ ಬಗ್ಗೆ ಪೂರ್ಣವಾದ ವಿವರಗಳನ್ನು ನೀಡಲಾಗುವುದು ತಿಳಿಸಿದ್ದಾರೆ.

ಹೇಗೆ ಆದಾಯ ಬರುತ್ತೆ?
ಪಂದ್ಯದ ಟಿಕೆಟ್‌ ಮಾರಾಟದಿಂದ ಪ್ರಾಂಚೈಸಿಗಳಿಗೆ ಮತ್ತು ಬಿಸಿಸಿಐಗೆ ದುಡ್ಡು ಬರುತ್ತಿತ್ತು. ಆದರೆ ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಆಯೋಜಿಸಿದರೆ ಪ್ರೇಕ್ಷಕರು ಬಾರದೇ ಇರುವ ಕಾರಣ ಈ ಹಣ ಬರುವುದಿಲ್ಲ.

ಬಿಸಿಸಿಐ ಅತಿ ಹೆಚ್ಚು ಹಣ ಟಿವಿ ಮತ್ತು ಡಿಜಿಟಲ್‌ ಪ್ರಸಾರದಿಂದ ಬರುತ್ತದೆ. ಇದರ ಜೊತೆ ಬೌಂಡರಿ ಬಳಿ ಇರುವ ಡಿಜಿಟಲ್‌ ಬೋರ್ಡ್‌ ಜಾಹೀರಾತು, ಬೌಂಡರಿ ಗೆರೆಯ ಲೈನ್‌ ಮೇಲೂ ಜಾಹೀರಾತು ಇರುತ್ತದೆ.

ಬಿಡ್‌ ಗೆದ್ದಿದ್ದು ಸ್ಟಾರ್‌ ಇಂಡಿಯಾ:
2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. 2017ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6,196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‌ಟೆಲ್‌ , ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು.

ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‌ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.

ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ 15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದರು.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ