ಬೆಂಗಳೂರು: ಸಿಲಿಕಾನ್ ಸಿಟಿಗೆ ಬೆಳ್ಳಂಬೆಳಗ್ಗೆ ಕೊರೊನಾ ಶಾಕ್ ನೀಡಿದ್ದು, ಮಾಹಾಮಾರಿಗೆ ಬೆಂಗಳೂರಿನಲ್ಲಿ ನಾಲ್ವರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ರೋಗಿ 4079 ಗದಗ ಮೂಲದ 54 ವರ್ಷ ವ್ಯಕ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ಟ್ರಾವೆಲ್ ಹಿಸ್ಟರಿಯಿದೆ. ರೋಗಿ 4845- 61 ವರ್ಷದ ವ್ಯಕ್ತಿ, ರೋಗಿ 5340 ಬಳ್ಳಾರಿ ಮೂಲದ 58 ವರ್ಷದ ವ್ಯಕ್ತಿ ಅಂತರ್ ಜಿಲ್ಲೆ ಪ್ರಯಾಣ ಬೆಳೆಸಿದ್ದು, ರೋಗಿ 5336- 72 ವರ್ಷ ವ್ಯಕ್ತಿ ಮೃತರಾದವರು.
ಮೃತಪಟ್ಟ ನಾಲ್ವರಲ್ಲಿ ಇಬ್ಬರನ್ನು ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿತ್ತು. ಉಳಿದ ಇಬ್ಬರು ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಿಂದ ಶಿಫ್ಟ್ ಆಗಿದ್ದರು. ಅನೇಕ ದಿನಗಳಿಂದ ಬಹಳ ಸೂಕ್ಷ್ಮ ಆರೋಗ್ಯ ಪರಿಸ್ಥಿತಿ ಇದ್ದ ಈ ನಾಲ್ವರು ಕೂಟ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಇಂದು ಸಿಲಿಕಾನ್ ಸಿಟಿಯಲ್ಲಿ ನಾಲ್ವರು ಮೃತಪಡುವ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಬುಧವಾರ ಸೋಂಕಿತರ ಸಂಖ್ಯೆ 6,041ಕ್ಕೆ ಏರಿಕೆಯಾಗಿದ್ದು, ಒಟ್ಟು 2,862 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3,108 ಸಕ್ರಿಯ ಪ್ರಕರಣಗಳಿವೆ.