ಬೆಳಗಾವಿ: ಪ್ರಸಕ್ತ ವರ್ಷ ಕಬ್ಬು ನುರಿಯುವ ಹಂಗಾಮು ಆರಂಭವಾದಾಗಿನಿಂದ ಮಾರ್ಚ 31 ರವರೆಗೆ ಯಾವ ಯಾವ ಸಕ್ಕರೆ ಕಾರ್ಖಾನೆಗಳು ಎಷ್ಟೆಷ್ಟು ಕಬ್ಬು ನುರಿಸಿವೆ ಮತ್ತು ಯಾವ ಯಾವ ಸಕ್ಕರೆ ಕಾರ್ಖಾನೆಗಳು ಈವರೆಗೆ ರೈತರಿಗೆ ಎಷ್ಟು ಹಣ ಸಂದಾಯ ಮಾಡಿವೆ ಮತ್ತು ಎಷ್ಟು ಪಾವತಿಸಿವೆ ಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಬಹಿರಂಗ ಪಡಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ (ಸಂ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು ಆಗ್ರಹಿಸಿದ್ದಾರೆ.
ರೈತರ, ಕೃಷಿ ಕಾರ್ಮಿಕರ, ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಗಮನಕ್ಕೆ ತಂದರೂ ಜಿಲ್ಲಾಧಿಕಾರಿಗಳಾಗಲಿ, ಆಹಾರ ಇಲಾಖೆಯ ಅಧಿಕಾರಿಗಳಾಗಲಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾಗಲಿ, ಸಕ್ಕರೆ ಆಯುಕ್ತರಾಗಲಿ, ಮುಖ್ಯ ಕಾರ್ಯದರ್ಶಿಗಳಾಗಲಿ ಹಾಗೂ ಮುಖ್ಯಮಂತ್ರಿಗಳಾಗಲಿ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಕೊರೋನಾ ಮುಂದಿಟ್ಟುಕೊಂಡು ಸಮಸ್ಯೆಗಳನ್ನು ಮರೆಮಾಚುವ ವ್ಯವಸ್ಥಿತ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೊರೋನಾ ಲಾಕ್ ಡೌನದಿಂದಾಗಿ ರೈತರು, ಹೂವು ಬೆಳೆಗಾರರು, ತೋಟಗಾರಿಕೆ ರೈತರು ತಮ್ಮ ಉತ್ಪನ್ನಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಆರ್ಥಿಕವಾಗಿ ಹಿಂದೆಂದು ಕಾಣದಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈಗ ರೈತರಿಗೆ ಆರ್ಥಿಕವಾಗಿ ಆಧಾರವಾಗಿರುವದು ಕಬ್ಬಿನ ಬಿಲ್ಲು ಮಾತ್ರ. ಇಂತಹ ಸಂಕಷ್ಟದ ಸಮಯದಲ್ಲೂ ಕಾರ್ಖಾನೆಗಳ ಮಾಲಿಕರು ಹಾಗೂ ಅಧಿಕಾರಿಗಳು ರೈತರ ಬದುಕಿನೊಂದಿಗೆ ಚಲ್ಲಾಟವಾಡುತ್ತಿರುವದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಕ್ಷಣ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರನ್ಸ ಮೂಲಕ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರಿಂದ ಮಾಹಿತಿ ಪಡೆದು, ರೈತರಿಗೆ ಹಣ ಪಾವತಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ತಕ್ಷಣ ಕ್ರಮ ಕೈಗೊಳ್ಳದಿದ್ದರೇ, ಕೊರೋನಾ ವೈರಸ್ನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವದರೊಂದಿಗೆ ಹೋರಾಟದ ರೂಪುರೇಷಗಳನ್ನು ಸಿದ್ದಪಡಿಸುವದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಕ್ರಮ ಮಾದರಿಯಾಗಲಿ: ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೊರೋನಾ ವೈರಸ್ ಹರಡದಂತೆ ರೈತರು, ವ್ಯಾಪಾರಸ್ಥರು ಹಾಘೂ ಕೂಲಿ ಕಾರ್ಮಿಕರಿಗೆ ರಕ್ಷಣೆ ನೀಡಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಾಸನಪುರ ಎಪಿಎಂಸಿಯಲ್ಲಿ ಕೊರೋನಾ ನಿರ್ಭಂಧಕ ಸ್ಯಾನಿಟೈಜರ್ ಟರ್ನಲ್ ಅಳವಡಿಸಿದ್ದಾರೆ. ಆ ಮಾದರಿಯಲ್ಲಿ ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ಆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಮಾಧ್ಯಮ ಪ್ರಕಟನೆಯಲ್ಲಿ ಸಲಹೆ ನೀಡಿದ್ದಾರೆ.