ಹುಬ್ಬಳ್ಳಿ: ಕೊರೊನಾದಿಂದ ಮದುವೆ, ಸಭೆ-ಸಮಾರಂಭ ಎಲ್ಲ ಕ್ಯಾನ್ಸಲ್ ಆಗಿದೆ. ಸಂಬಂಧಿಕರು ಸತ್ತರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಹೀಗಾಗಿ ಕೆಲವೆಡೆ ಮಾನವೀಯ ದೃಷ್ಟಿಯಿಂದ ಪೊಲೀಸರು ಬಿಟ್ಟುಕಳಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡನೊಬ್ಬ ಐದು ವರ್ಷದ ಹಿಂದೆಯೇ ಸತ್ತ ತಂದೆಯನ್ನೇ ಮತ್ತೊಮ್ಮೆ ಸತ್ತಿರುವುದಾಗಿ ಸುಳ್ಳು ಹೇಳಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತದಿಂದ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಬಯಲಿದೆ ಬಂದಿದೆ.
ಹುಬ್ಬಳ್ಳಿಯ ಕೈ ಮುಖಂಡ, ಕರ್ನಾಟಕ ರಕ್ಷಣಾ ದಳದ ರಾಜಾದ್ಯಕ್ಷ ಸೋಮಲಿಂಗ್ ಯಲಿಗಾರ ಜಿಲ್ಲಾಡಳಿತದ ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಇದೀಗ ದಾಖಲೆ ಸಮೇತ ಬಯಲಾಗಿದೆ. ಕೈ ಮುಖಂಡ ಸೋಮಲಿಂಗ್ ಯಲಿಗಾರ ತಮ್ಮ ತಂದೆ ಬೆಂಗಳೂರಿನಲ್ಲಿ ಮೃತಪಟ್ಟಿರುವುದಾಗಿ ಹೇಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಧಾರವಾಡ ಜಿಲ್ಲಾಡಳಿತದಿಂದ ಪಾಸ್ ಪಡೆದಿದ್ದರು. ಆದರೆ 5 ವರ್ಷದ ಹಿಂದೆಯೇ ಇವರ ತಂದೆ ಮೃತಪಟ್ಟಿದ್ದಾರೆ.
ಅಲ್ಲದೇ ಪಾಸ್ ವಿತರಣೆ ವೇಳೆ ಜಿಲ್ಲಾಡಳಿತ ಬೆಂಗಳೂರಿನಿಂದ ಮರಳಿ ಹುಬ್ಬಳ್ಳಿಗೆ ಬಾರದಂತೆ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಪಾಸ್ ವಿತರಣೆ ಮಾಡಿದೆ. ಆದರೆ ಸ್ವತಃ ಕಾರಿನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಸೋಮಲಿಂಗ್ ಯಲಿಗಾರ ಜಿಲ್ಲಾಡಳಿತದ ಪಾಸ್ ದುರ್ಬಳಕೆ ಮಾಡಿಕೊಂಡು ಮರಳಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಮಧ್ಯೆ ಬೆಂಗಳೂರಿನಿಂದ ಮರಳಿ ಹುಬ್ಬಳ್ಳಿಗೆ ಆಗಮಿಸಿರೋ ಸೋಮಲಿಂಗ್ ಯಲಿಗಾರನನ್ನ ಡಾವಣಗೇರೆ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೂ ಸಹ ಸುಳ್ಳು ಹೇಳಿ ಕೈ ಮುಖಂಡ ಮರಳಿ ಮನೆಗೆ ಆಗಮಿಸಿದ್ದಾರೆ.
ಈಗಾಗಲೇ ಸತ್ತ ತಂದೆಯ ಹೆಸರಿನಲ್ಲಿ ಪಾಸ್ ಪಡೆದು ಬೆಂಗಳೂರಿಗೆ ಹೋಗಿದ್ದ ಕೈ ಮುಖಂಡ ತನ್ನ ಕಾರಿನಲ್ಲಿ ಹುಡುಗಿಯೊಬ್ಬಳನ್ನ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಆದರೆ ಲಾಕ್ಡೌನ್ ಮಧ್ಯೆ ರೋಡಿಗಿಳಿಯೋ ವಾಹನಗಳನ್ನ ಸೀಜ್ ಮಾಡೋ ಪೊಲೀಸರು ಕೈ ಮುಖಂಡನ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುತ್ತಾರ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.