ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಾಲ್ಕು ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು, ಕುಡಚಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ.
ಲಾಕ್ಡೌನ್ ಆದಗಿನಿಂದ ಜನರು ಹೊರ ಬರದೆ ಮನೆಯಲ್ಲಿಯೇ ಇದ್ದಾರೆ. ಆದರೂ ಕುಡಚಿ ಪಟ್ಟಣದ ಮೂವರು ಮಹಿಳೆಯರಿಗೆ ಹಾಗೂ ಓರ್ವ ಪುರುಷನಿಗೆ ಕೊರೊನಾ ಧೃಡವಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಸೋಂಕಿತರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತ 4 ಜನರ ಪ್ರೈಮರಿ ಹಂತದ ಸಂಪರ್ಕದಲ್ಲಿದ್ದವರ ಸ್ಥಳಾಂತರ ಮಾಡಲಾಗಿದ್ದು, ಕುಡಚಿ ಪಟ್ಟಣದ ಸರ್ಕಾರಿ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಗೆ 64 ಜನರಿಗೆ ಕ್ವಾರಂಟೈನ್ ಮಾಡುವ ಜವಾಬ್ದಾರಿ ವಹಿಸಲಾಗಿದೆ. ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮಕ್ಕೆ ಎರಡು ಕುಟುಂಬಗಳು ಸೇರಿ ತೆರಳಿದ್ದರು. ಅದರಲ್ಲಿ 4 ಜನರ ಸೋಂಕು ಧೃಡವಾಗಿದ್ದು, ಇನ್ನೂ 4 ಜನರ ವರದಿ ಬರಬೇಕಿದೆ. ಒಟ್ಟು ಕುಡಚಿ ಪಟ್ಟಣದಿಂದ 23 ಜನ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸದ್ಯಕ್ಕೆ 19 ಜನರ ವರದಿಗಾಗಿ ಕಾಯಲಾಗುತ್ತಿದೆ
ಶೇ.85 ರಷ್ಟು ಮುಸ್ಲಿಂ ಸಮುದಾಯ ಇರುವ ಕುಡಚಿ ಪಟ್ಟಣದಲ್ಲಿ ಈಗಾಗಲೇ ಬಫರ್ ಝೋನ್ ನಿರ್ಮಾಣ ಮಾಡಲಾಗಿದ್ದು, ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಸ್ದಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕುಡಚಿ ಪಟ್ಟಣದ ಅಕ್ಕಪಕ್ಕದ ಗ್ರಾಮಗಳಲ್ಲೂ ಹೈ ಅಲರ್ಟ್ ವಾತವಾರಣ ನಿರ್ಮಾಣವಾಗಿದ್ದು, ಗ್ರಾಮಸ್ಥರೇ ಸೇರಿ ಗ್ರಾಮಗಳಿಗೆ ಬೇರೆಯವರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ.