ಚಿಕ್ಕಬಳ್ಳಾಪುರ, ಏ.25- ಮೃತ ಸೋಂಕಿತನ ಬಳಿ ದಿನಸಿ ಕಿಟ್ ಪಡೆದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ವಿವಿಧ ವಾರ್ಡ್ಗಳ ಜನತೆ ತಲ್ಲಣಗೊಂಡಿದ್ದಾರೆ.ಚಿಕ್ಕಬಳ್ಳಾಪುರ ನಗರದಲ್ಲಿ ಇದೀಗ ಮತ್ತೊರ್ವ 39 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಗೊಂಡ ನಂತರ , ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾದಂತಾಗಿದೆ
ಮಾ.5ರಂದು ಈಕೆ ಕೊರೊನಾ ಸೋಂಕಿಗೆ ಬಲಿಯಾದ ವೃದ್ಧ ರೋಗಿ-250ರ ಮನೆಗೆ ತೆರಳಿ ದಿನಸಿ ಕಿಟ್ ಪಡೆದುಕೊಂಡಿದ್ದರು. ಈಕೆಗೆ ಕೊರೊನಾ ಸೋಂಕು ದೃಢವಾಗಿದ್ದು, ದಿನಸಿ ಕಿಟ್ ಪಡೆದ ನಗರದ 17, 13, 12 ಮತ್ತು 14 ನೇ ವಾರ್ಡ್ ಸೇರಿ ನೂರಾರು ಮಂದಿಗೆ ಈಗ ಕೊರೊನಾ ಹರಡಲಿರುವ ಆತಂಕ ಜನರಿಗೆ ಶುರುವಾಗಿದೆ.
ಸೋಂಕಿತ ಮಹಿಳೆ ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ರೇಷ್ಮೆ ನೂಲು ಬಿಚ್ಚಣಿಕೆ ಕೆಲಸ ಮಾಡುತ್ತಿದ್ದು, ರೇಷ್ಮೆ ನೂಲು ಕಾರ್ಖಾನೆಯ ಮಾಲೀಕ, ಮಾಲೀಕನ ಹೆಂಡತಿ-ಮಕ್ಕಳು, ಕಾರ್ಖಾನೆಯಲ್ಲಿ ಕೆಲಸ ಮಾಡುವ 6 ಮಂದಿ ಕಾರ್ಮಿಕರು, ಸೋಂಕಿತೆಯ ಅಕ್ಕ-ಭಾವ ಹಾಗೂ ಮಕ್ಕಳು ಸೇರಿದಂತೆ ಒಟ್ಟು 22 ಮಂದಿಯನ್ನು ಪ್ರಥಮ ಸಂಪರ್ಕಿತರೆಂದು ಗುರುತಿಸಲಾಗಿದೆ. ಈ ಎಲ್ಲರನ್ನೂ ಸದ್ಯ ಕ್ವಾರಂಟೈನ್ ಮಾಡಲಾಗಿದೆ.
ಇವರೆಲ್ಲರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿ ಆರ್.ಲತಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಗರದ 65 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗುವ ಮುನ್ನ ಈ ಏರಿಯಾದಲ್ಲಿ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡಿದ್ದ. ಈ ಪಿ-250 65 ವರ್ಷದ ವೃದ್ಧ ಏಪ್ರಿಲ್ 15 ರಂದು ಮೃತಪಟ್ಟಿದ್ದರು.
ಕೊರೊನ ವೈರಸ್ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಹರಸಾಹಸ ಪಡುತ್ತಿದ್ದರೂ ಜನರು ಸೀಲ್ಡೌನ್ ಲೆಕ್ಕಿಸದೆ ವಾರ್ಡುಗಳಲ್ಲಿ ನಗರದ ಪ್ರಮುಖ ರಸ್ರೆಗಳಲ್ಲಿ ಅಡ್ಡಾಡತೊಡಗಿದ್ದಾರೆ. ಪೊಲೀಸರಂತೂ ರಸ್ತೆಗಿಳಿದ ಪ್ರತಿಯೊಬ್ಬರನ್ನೂ ಪರಿಶಿಲಿಸಿ ಮುಂದಕ್ಕೆ ಕಳುಹಿಸುವ ಕೆಲಸದಲ್ಲಿ ತೊಡಗಿದ್ದಾರೆ ಆದರೂ ಒಂದಲ್ಲ ಒಂದು ನೆಪ ಹೇಳಿ ರಸ್ತೆಗಳ್ಲಿ ಅಡ್ಡಾಡುತಿದ್ದಾರೆ.