ಬೆಳಗಾವಿ : ರಾಮದೇವಗಲ್ಲಿಯ ವಿ.ಪಿ.ವೇರ್ಣೇಕರ ಸನ್ಸ್ ಎಂಬ ಚಿನ್ನಾಭರಣ ಅಂಗಡಿಯಲ್ಲಿ ಗುರುವಾರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ದೂರುದಾರ ಮಾಲೀಕನೇ ಆರೋಪಿಯಾಗಿ ಪೊಲೀಸರ ಬಂಧಿಯಾಗಿದ್ದಾನೆ. ತನ್ನದೇ ಅಂಗಡಿಯಿಂದ ತಾನೇ ಚಿನ್ನಾಭರಣ ಹೊತ್ತೊಯ್ದು ಕಳ್ಳತನದ ಕಥೆ ಕಟ್ಟಿದ ಮಾಲೀಕ ಈಗ ಕಳ್ಳನಾಗಿದ್ದಾನೆ.
ಟಿಳಕವಾಡಿ ಸಾವರಕರ ರಸ್ತೆಯ ಕೃಷ್ಣಾನಂದ ವೇರ್ಣೇಕರ ಗುರುವಾರ ರಾತ್ರಿ ರಾಮದೇವಗಲ್ಲಿಯ ಅಂಗಡಿ ಬಾಗಿಲನ್ನು ಯಾರೋ ಮುರಿದು ಚಿನ್ನ ಮತ್ತು ಬೆಳ್ಳಿಯ ಆಭರಣ ಮತ್ತು ಹಣ ಕದ್ದುಕೊಂಡು ಹೋಗಿರುವ ಬಗ್ಗೆ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.
ದೂರು ದಾಖಲಾಗುತ್ತಿದ್ದಂತೆಯೇ ಶುಕ್ರವಾರ ಬೆಳಗ್ಗೆ ಬೆರಳು ಮುದ್ರೆ ಘಟಕ, ಸುಕೋ ತಂಡ ಹಾಗೂ ಇತರೆ ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಸ್ಥಳದಲ್ಲಿ ಸಿಕ್ಕ ಎಲ್ಲ ಪುರಾವೆಗಳನ್ನು ವಶಪಡಿಸಿಕೊಂಡಿದ್ದರು.
ಕಳ್ಳತನದ ಸ್ವರೂಪ ಹಾಗೂ ಮಾಲೀಕ ಹೇಳುತ್ತಿದ್ದ ಘಟನಾವಳಿಗಳನ್ನು ಆಧರಿಸಿ ಸೂಕ್ಷ್ಮ ರೀತಿಯಲ್ಲಿ ಪರಿಶೀಲಿಸಿದಾಗ ದೂರುದಾರ ಮಾಲೀಕನ ಮೇಲೆಯೇ ಸಂಶಯ ಬಂದಿದೆ. ತಕ್ಷಣ ಆತನನ್ನೇ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.
ತನ್ನ ಅಂಗಡಿಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ತೆಗೆದುಕೊಂಡು ಸ್ಕೂಟರ್ ಸ್ಕೂಟಿಯ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿರುವುದು ತನಿಖೆಯಲ್ಲಿ ಬಯಲಾಗಿದೆ. 62,60,990ರೂ. ಮೌಲ್ಯದ 519.8 ಗ್ರಾಂ ಚಿನ್ನಾಭರಣ, ರೂ.6,000ರೂ. ಮೌಲ್ಯದ 31 ಗ್ರಾಂ. ಬೆಳ್ಳಿ ಆಭರಣ, 2,83,010ರೂ. ನಗದು, 45 ಸಾವಿರ ರೂ. ಮೌಲ್ಯದ ಸ್ಕೂಟರ್ ಸೇರಿ ಒಟ್ಟು 65.95 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.
Laxmi News 24×7