ಚಿಕ್ಕಮಗಳೂರು: ಕನ್ನಡಿ ಅಂದ್ರೆ ಒಂದು ಶಕ್ತಿ.. ಇಂತಹ ಶಕ್ತಿ ಪ್ರತಿಯೊಬ್ಬ ಕನ್ನಡಿಗನ ನರನಾಡಿಯಲ್ಲೂ ಹರಿಯುತ್ತಿದೆ. ಕನ್ನಡಕ್ಕೆ ತನ್ನದೆ ಆದ ಇತಿಹಾಸವಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಬಳಕೆ ಮಾಡೋರು ಕಮ್ಮಿ. ಆದ್ರೆ ನೀವು ದೇಗುಲಕ್ಕೆ ಹೋದ್ರೆ ಎಲ್ಲವೂ ಕನ್ನಡಮಯ.
ಕನ್ನಡ ಅನ್ನೋ ಭಾಷೆಗೆ ತನ್ನದೇ ಆದ ತಾಕತ್ತು ಇದೆ.. ಈ ಭಾಷೆ ಸಾಕಷ್ಟು ಮಹತ್ವವನ್ನ ಹೊಂದಿದೆ. ಕನ್ನಡ ಪದಗಳು ಕಿವಿಗೆ ಬೀಳುತ್ತಿದ್ದರೆ ಮನಸ್ಸಿಗೆ ನೆಮ್ಮದಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಪರಭಾಷೆಯ ವ್ಯಾಮೋಹದಿಂದ ತತ್ತರಿಸಿ ಹೋಗಿದೆ. ನಮ್ಮ ನಡುವೆ ಟಸ್ಸು, ಪುಸ್ಸು ಇಂಗ್ಲಿಷ್ ಬಳಸೋರೆ ಜಾಸ್ತಿ. ಆದ್ರೆ ಈ ದೇಗುಲದಲ್ಲಿ ಕನ್ನಡದ ಮಂತ್ರ ದಿನ ನಿತ್ಯ ಮೊಳಗುತ್ತೆ. ಕಣ್ಣು ಹಾಯಿಸಿದ ಕಡೆಯಲ್ಲಾ ಸುಂದರ ಕನ್ನಡ ಅಕ್ಷರಗಳು ಕಾಣಸಿಗುತ್ತೆ.
ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯ. ಇಲ್ಲಿ ಕೋದಂಡರಾಮನಿಗೆ ಕನ್ನಡದಲ್ಲೇ ಪೂಜೆ-ಕೈಂಕರ್ಯಗಳನ್ನ ನೆರವೇರಿಸಲಾಗುತ್ತೆ. ಈ ದೇವಾಲಯದ ಅರ್ಚಕರಾಗಿರೋ ಹಿರೇಮಗಳೂರು ಕಣ್ಣನ್ ಕನ್ನಡದಲ್ಲೇ ಪೂಜೆ ಮಾಡೋದನ್ನ ರೂಢಿಸಿಕೊಂಡಿದ್ದಾರೆ. ನಿತ್ಯವೂ ಮಂತ್ರ ಪಠಣ, ಹೋಮ, ಹವನ ಎಲ್ಲವೂ ಕನ್ನಡದಲ್ಲೇ ನಡೆಯುತ್ತೆ. ದೇವಾಲಯದೊಳಗಿನ ಗೋಡೆಗಳ ಮೇಲೆಲ್ಲವೂ ಕನ್ನಡದ ಅಕ್ಷರಗಳು ರಾರಾಜಿಸುತ್ತಿವೆ.
ದೇಶ ವಿದೇಶಗಳಿಂದ್ಲೂ ಇಲ್ಲಿಗೆ ನೂರಾರು ಭಕ್ತರು ಆಗಮಿಸ್ತಾರೆ. ವಿಶ್ವದ ನಾನಾ ಭಾಗಗಳಿಂದ ಬರೋ ವಿದೇಶಿಗರಿಗೆ ಸಂಸ್ಕೃತ ಹೇಳಿಕೊಡೋ ಕಣ್ಣನ್, ಕೋದಂಡರಾಮನಿಗೆ ಕನ್ನಡದಲ್ಲೇ ಪೂಜಾ ಕೈಂಕರ್ಯ ನೆರವೇರಿಸ್ತಿದ್ದಾರೆ. ಕನ್ನಡದಲ್ಲೇ ಮಂತ್ರ ಪಠಣ ಕೇಳಿ ಭಕ್ತರಿಗೂ ಖುಷಿಯಾಗುತ್ತೆ.
ಒಟ್ಟಾರೆ, ಇಲ್ಲಿಗೆ ಬರೋ ಭಕ್ತರಿಗೆ ಕನ್ನಡ ನಾಡು ನುಡಿಯ ಬಗ್ಗೆ ಅರಿವೂ ಮೂಡಿಸುವ ಕಾರ್ಯವನ್ನು ಈ ದೇವಾಲಯ ಮಾಡ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದ ನಡುವೆ ಮರೆಯಾಗ್ತಿರೋ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಕಣ್ಣನ್ರವರ ಸಾಧನೆ ನಿಜಕ್ಕೂ ಶ್ಲಾಘನೀಯ.
-ಪ್ರಶಾಂತ್