ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ರೂ, ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಅವರ ತಪ್ಪನ್ನು ಮನ್ನಿಸಬೇಕು. ಪಕ್ಷಕ್ಕೆ ಕರೆತಂದು ಬಿಜೆಪಿಯಿಂದ ವಿಪಕ್ಷ ನಾಯಕರನ್ನಾಗಿ ಮಾಡಬೇಕು ಎಂದು ರೆಬೆಲ್ ನಾಯಕ ಕುಮಾರ್ ಬಂಗಾರಪ್ಪ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ ಚುಣಾವಣೆಯಲ್ಲಿ ಬಿಜೆಪಿ ನಾಯಕರು ಅಡ್ಡಮತದಾನ ಮಾಡಿದ ಹಿನ್ನೆಲೆ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಭಿನ್ನಮತೀಯರು ದನಿ ಎತ್ತಿದ್ದಾರೆ. ವಿಡಿಯೋ ಹೇಳಿಕೆಯೊಂದನ್ನ ಬಿಡುಗಡೆ ಮಾಡಿರುವ ಕುಮಾರ್ ಬಂಗಾರಪ್ಪ ಅವರು, ರಾಜ್ಯ ಬಿಜೆಪಿಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವಂತೆ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.
ಹಾಲಿ ವಿಪಕ್ಷ ಸ್ಥಾನಗಳು, ರಾಜ್ಯಾಧ್ಯಕ್ಷ ಸ್ಥಾನ, ಪದಾಧಿಕಾರಿಗಳನ್ನ ಮುಂದುವರೆಸುವ ವಿಚಾರದಲ್ಲಿ ಮರು ಅವಲೋಕನ ಮಾಡಬೇಕಿದೆ. ಬೇರೆ ರಾಜ್ಯಗಳ ಬಿಜೆಪಿ ಘಟಕಗಳಲ್ಲಿ ಬದಲಾವಣೆ ಮಾಡಿದಂತೆ ರಾಜ್ಯ ಬಿಜೆಪಿಯಲ್ಲೂ ಮಾಡಬೇಕಿದೆ ಎಂದರಲ್ಲದೇ ಪಕ್ಷದ ಬಲವರ್ಧನೆಗೆ ಪಕ್ಷ ಬಿಟ್ಟವರ ಘರ್ ವಾಪಸಿಗೂ ಕುಮಾರ್ ಬಂಗಾರಪ್ಪ ಮನವಿ ಮಾಡಿದ್ದಾರೆ.
ಉಚ್ಛಾಟನೆ ಮಾಡಿದ್ರೂ ಬಿಜೆಪಿ ಪರ ಯತ್ನಾಳ್ ಮತದಾನ ಮಾಡಿದ್ದಾರೆ. ಯತ್ನಾಳ್ ಪಕ್ಷಕ್ಕೆ ನಿಷ್ಠಾವಂತ ಆಗಿದ್ದಾರೆ. ಅವರ ತಪ್ಪನ್ನ ಮನ್ನಿಸುವ ಕೆಲಸ ಹೈಕಮಾಂಡ್ನಿಂದ ಆಗಬೇಕು. ಅವರನ್ನ ಪಕ್ಷಕ್ಕೆ ವಾಪಸ್ ಕರೆತರಬೇಕು, ಬಿಜೆಪಿಯಿಂದ ವಿಪಕ್ಷ ನಾಯಕರನ್ನಾಗಿ ಮಾಡಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.
ಬಿಜೆಪಿಯಲ್ಲಿ ಅನೇಕ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಆಗಬೇಕು, ಯತ್ನಾಳ್ ಸೇರಿದಂತೆ ಪಕ್ಷದ ನಿಷ್ಠಾವಂತರನ್ನ ವಾಪಸ್ ಕರೆತರಬೇಕು. 2028ರ ಚುನಾವಣಾ ದೃಷ್ಟಿಯಿಂದ ಪಕ್ಷ ಸಂಘಟನೆ ಆಗಬೇಕು. ಹೀಗಾಗಿ ಎಲ್ಲಾ ಹಂತದಲ್ಲೂ ಹೈಕಮಾಂಡ್ ಬದಲಾವಣೆ ಮಾಡಬೇಕು. ಏಕೆಂದ್ರೆ ಸಂಘಟನೆ ಮಾಡಲು ಇದು ಸಕಾಲ, ಕಾಂಗ್ರೆಸ್ ಪಕ್ಷವನ್ನ ಕರ್ನಾಟಕದಿಂದಲೂ ಕಿತ್ತೊಗೆಯಬೇಕು. ಹಾಗಾಗಿ ಹೈಕಮಾಂಡ್ ಕರ್ನಾಟಕದತ್ತ ಗಮನ ಹರಿಸಬೇಕು ಅಂತ ಒತ್ತಾಯಿಸಿದ್ದಾರೆ.
Laxmi News 24×7