ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ ಕೊನೆಗೂ ವಿಜಯಪುರದಲ್ಲಿ ಬಯಲಾಗಿದೆ.. ಬರೋಬ್ಬರಿ 1 ಕೋಟಿ 65 ಲಕ್ಷ ಮೌಲ್ಯದ ಮದ್ಯ ಹಾಗೂ ಟ್ರಕ್ ಈಗ ಖಾಕಿ ವಶದಲ್ಲಿದೆ.
ಪೊಲೀಸ್ ಠಾಣೆಯಲ್ಲಿ ನಿಂತಿರೋ ಟ್ರಕ್.. ಟ್ರಕ್ ಪಕ್ಕದಲ್ಲೆ ಕೋಟಿ ಮೌಲ್ಯದ ಗೋವಾ ಲಿಕ್ಕರ್… ಪಕ್ಕದಲ್ಲೆ ಎರೆಹುಳ ಗೊಬ್ಬರ.. ಇದೆ ಗೊಬ್ಬರದ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದು ಬರೋಬ್ಬರಿ ಕೋಟಿ ಕೋಟಿ ಮೌಲ್ಯದ ಗೋವಾ ಮದ್ಯ! ಹೌದು, ಗೋವಾದಿಂದ ಮಹಾರಾಷ್ಟ್ರಕ್ಕೆ ಲಿಕ್ಕರ್ ಸಪ್ಲೈ ಮಾಡಲು ಖದೀಮರು ಸಿನೆಮಾ ಸ್ಟೈಲ್ನಲ್ಲಿ ಸ್ಕೆಚ್ ಹಾಕಿದ್ರು. ಆದ್ರೆ ವಿಜಯಪುರ ಪೊಲೀಸರ ಹದ್ದಿನ ಕಣ್ಣಿಗೆ ಈ ಚಾಲಾಕಿ ಗ್ಯಾಂಗ್ ಕೊನೆಗೂ ಬಿದ್ದೇ ಬಿಟ್ಟಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಟೋಲ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮದ್ಯ ತುಂಬಿದ್ದ ಟ್ರಕ್ ಅನ್ನು ಅಡ್ಡಗಟ್ಟಿದ್ದಾರೆ. ಆರಂಭದಲ್ಲಿ ಡ್ರೈವರ್ಗಳು ‘ಇದು ಎರೆಹುಳ ಗೊಬ್ಬರ ಸರ್, ಬೇಗ ಬಿಡಿ’ ಅಂತ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ್ರು. ಆದ್ರೆ ಅನುಮಾನಗೊಂಡು ಪೊಲೀಸರು ಗೊಬ್ಬರದ ಚೀಲಗಳನ್ನು ಕೆಳಗೆ ಇಳಿಸಿ ನೋಡಿದಾಗ ಕಣ್ಣು ಕತ್ತಲೆ ಬರುವಂತಾಗಿತ್ತು. ಟ್ರಕ್ನ ಒಳಭಾಗದಲ್ಲಿ ಕೋಟಿ ಮೌಲ್ಯದ ಗೋವಾ ಮದ್ಯದ ಬಾಕ್ಸ್ಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಜೋಡಿಸಿಡಲಾಗಿತ್ತು.
ಅಷ್ಟಕ್ಕೂ ಈ ಖದೀಮರು ಪೊಲೀಸರಿಗೆ ಸಿಕ್ಕಿಬೀಳಬಾರದು ಅಂತ ಜಿಪಿಎಸ್ ಆಧಾರಿತ ಹೈಟೆಕ್ ಐಡಿಯಾ ಬಳಸಿದ್ರು. ಮದ್ಯ ಸಾಗಾಟದ ರೂಟ್ ಮ್ಯಾಪ್ ಯಾರಿಗೂ ಲೀಕ್ ಆಗಬಾರದು ಅಂತ ಇಡೀ ದಾರಿಯುದ್ದಕ್ಕೂ ಹತ್ತಾರು ಡ್ರೈವರ್ಗಳನ್ನು ಬದಲಾಯಿಸಲಾಗಿತ್ತು! ಒಬ್ಬ ಡ್ರೈವರ್ಗೆ ಕೇವಲ ಒಂದು ನಿರ್ದಿಷ್ಟ ಜಿಪಿಎಸ್ ಲೊಕೇಶನ್ ತಲುಪಿಸೋ ಟಾರ್ಗೆಟ್ ಅಷ್ಟೇ ಇರ್ತಿತ್ತು. ಅಲ್ಲಿಗೆ ಹೋದ ತಕ್ಷಣ ಮತ್ತೊಬ್ಬ ಡ್ರೈವರ್ ಗಾಡಿ ಹತ್ತುತ್ತಿದ್ದ. ಈ ಪ್ಲಾನ್ನಿಂದಾಗಿ ಗೋವಾ ಮೂಲಕ ಬಂದಿದ್ದ ಟ್ರಕ್, ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸರಾಗವಾಗಿ ದಾಟಿ ಬಂದಿತ್ತು.
ಆದ್ರೆ ವಿಜಯಪುರ ಜಿಲ್ಲೆಗೆ ಎಂಟ್ರಿ ಕೊಡ್ತಿದ್ದಂತೆ ಖದೀಮರ ಆಟ ಬಂದ್ ಆಗಿದೆ. ಸದ್ಯ ಪೊಲೀಸರು ಟ್ರಕ್ನಲ್ಲಿದ್ದ ಬರೋಬ್ಬರಿ 1.31 ಕೋಟಿ ಮೌಲ್ಯದ ಗೋವಾ ಮದ್ಯ ಹಾಗೂ ಟ್ರಕ್ ಸೇರಿ ಒಟ್ಟು 1 ಕೋಟಿ 65 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಅಂತರರಾಜ್ಯ ಮದ್ಯದ ದಂಧೆಯಲ್ಲಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಗದಗ ಮೂಲದ ಶ್ರೀನಿವಾಸ್, ವಿಜಯಪುರದ ಹುಸೇನ್ಸಾಬ ಮುಲ್ಲಾ, ಬಸವರಾಜ್ ಭಜಂತ್ರಿ ಹಾಗೂ ಮಹಾರಾಷ್ಟ್ರ ಸೊಲ್ಲಾಪುರದ ಸಿದ್ಧರಾಮ ಡಾಲೆ ಸದ್ಯ ಕಂಬಿ ಎಣಿಸುತ್ತಿದ್ದಾರೆ.
ಒಟ್ಟಿನಲ್ಲಿ ಮೂರು ಜಿಲ್ಲೆಗಳ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ಬಂದಿದ್ದ ಚಾಲಾಕಿ ಖದೀಮರನ್ನು ಹಿಡಿಯುವಲ್ಲಿ ವಿಜಯಪುರ ಖಾಕಿ ಪಡೆ ಯಶಸ್ವಿಯಾಗಿದೆ. ಈ ಹೈಟೆಕ್ ಲಿಕ್ಕರ್ ಮಾಫಿಯಾದ ಕಿಂಗ್ಪಿನ್ ಯಾರು? ಇದರ ಹಿಂದೆ ಬೇರೆ ಯಾರಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Laxmi News 24×7