ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಏನೆಂಬುದು ಇಂದೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಆ ಮೂಲಕ ಸಚಿವರು ಹಾಗೂ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಿಸಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರ 54ನೇ ಪುಣ್ಯತಿಥಿ ನಿಮಿತ್ತ ವಿಧಾನಸೌಧದ ಬಳಿ ಅವರ ಭಾವಚಿತ್ರಕ್ಕೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು.
ಖಾಲಿಯಿರುವ 7 ಸ್ಥಾನಗಳನ್ನು ತುಂಬುವುದು ಖಚಿತ. ಬುಧವಾರ ಇಲ್ಲವೇ ಗುರುವಾರ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಆಹ್ವಾನಿಸಿದ್ದು, ಅವರ ಅನುಕೂಲತೆ ನೋಡಿಕೊಂಡು ದಿನಾಂಕ ಹಾಗೂ ಸಮಯ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಅನ್ನೋ ಟೆನ್ಷನ್ನಲ್ಲಿ ಸಚಿವರಿಗೆ ಶುರುವಾಗಿದೆ. ಸದ್ಯ ಸಂಪುಟದಲ್ಲಿ ಖಾಲಿ ಇರುವುದೇ ಏಳು ಸ್ಥಾನ. ಆದ್ರೆ ಸಚಿವಾಕಾಂಕ್ಷಿಗಳ ದಂಡೇ ಇದೆ.
ಇನ್ನು ಏಳು ಶಾಸಕರಿಗೆ ಅವಕಾಶ ನೀಡಿದರೆ ಒಂದು ಸ್ಥಾನವೂ ಖಾಲಿ ಉಳಿಯುವುದಿಲ್ಲ. ಯಾವುದೇ ಸರ್ಕಾರದಲ್ಲಿ ಯಾರೇ ಮುಖ್ಯಮಂತ್ರಿ ಇದ್ದರೂ ಒಂದೆರಡು ಸ್ಥಾನ ಖಾಲಿ ಉಳಿಸಿಕೊಳ್ಳುತ್ತಾರೆ. ಅಸಮಾಧಾನಿತರನ್ನ ಸಮಾಧಾನ ಮಾಡಲು ಖಾಲಿ ಇಟ್ಕೊಂಡಿರುತ್ತಾರೆ. ಹೀಗಾಗಿ ಸಿಎಂ ಏಳು ಸ್ಥಾನ ತುಂಬುತ್ತೇವೆ ಅಂತ ಹೇಳಿರುವುದು ಹಾಲಿ ಸಚಿವರ ಟೆನ್ಷನ್ಗೆ ಕಾರಣ ಎನ್ನಲಾಗಿದೆ.
‘ಆಪರೇಷನ್’ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಅವರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಹಿರಿಯ ಶಾಸಕ ಉಮೇಶ್ ಕತ್ತಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್, ರೇಣುಕಾಚಾರ್ಯ, ರಾಮದಾಸ್, ಪೂರ್ಣಿಮಾ ಶ್ರೀನಿವಾಸ್ ಅರವಿಂದ ಬೆಲ್ಲದ್, ಪರಣ್ಣ ಮುನವಳ್ಳಿ ಸೇರಿದಂತೆ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿವೆ. ಕೊನೆಗೆ ಯಾರು ಜಾಕ್ ಪಾಟ್ ಹೊಡೆಯಲಿದ್ದಾರೆ ಕಾದು ನೋಡಬೇಕಿದೆ.