ಮೈಸೂರು: ಬಿಎಲ್ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಅರ್ಜಿ ಭರ್ತಿ ಮಾಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಕೆ.ಆರ್. ನಗರದ ಮೂರು ವಾರ್ಡ್ಗಳಲ್ಲಿ ಯಾರದೋ SIR ಅರ್ಜಿಗಳನ್ನು ಇನ್ಯಾರೋ ಭರ್ತಿ ಮಾಡ್ತಿದ್ದಾರೆ. ಬಿಎಲ್ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಅರ್ಜಿ ಭರ್ತಿ ಮಾಡಿಸುತ್ತಿದ್ದಾರೆ. ಬಿಎಲ್ಒಗಳು ಬಿಸಿಲಲ್ಲಿ ಪ್ರತಿ ಮನೆಗೆ ಹೋಗಲು ಆಗಲ್ಲ ಅಂತ ತಾವೇ ಹಣ ಕೊಟ್ಟು ಬೇರೆಯವರಿಂದ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಮೂಹಿಕವಾಗಿ ಮತದಾರ ಪಟ್ಟಿ ಪರಿಷ್ಕರಣೆ ಸಮರ್ಥಿಸಿಕೊಂಡ ಗೃಹ ಸಚಿವರ ಹೇಳಿಕೆಗೆ ಸಾರಾ ಮಹೇಶ್ ಗರಂ ಆಗಿದ್ದಾರೆ. ಗೃಹ ಸಚಿವರಿಗೆ ಕಾನೂನಿನ ಅರಿವಿಲ್ಲ. ಕಾನೂನಿನ ಅರಿವು ಇದ್ದವರು ಮಾತಾಡುವ ರೀತಿ ಗೃಹ ಸಚಿವರು ಮಾತಾಡಿಲ್ಲ. ಬೇರೆ ಯಾವ ಸಚಿವರು ಈ ಬಗ್ಗೆ ಮಾತಾಡುತ್ತಿಲ್ಲ. ಗೃಹ ಸಚಿವರು ಯಾಕೆ ಕಾನೂನು ಬಾಹಿರವಾದದ್ದನ್ನು ಸಮರ್ಥನೆ ಮಾಡುತ್ತಿದ್ದಾರೆ? ಎಸ್ಐಆರ್ ಅಂದ ತಕ್ಷಣ ಗೃಹ ಸಚಿವರಿಗೆ ಯಾಕೆ ಭಯ ಎಂದು ಪ್ರಶ್ನಿಸಿದ್ದಾರೆ.
ಮುಡಾದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, 50:50ರ ಎಲ್ಲಾ ಸೈಟ್ಗಳನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಳ್ಳಬೇಕು. 50:50 ಅನುಪಾತದಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಆ ಬಗ್ಗೆ ತನಿಖಾ ಆಯೋಗಗಳು ವರದಿ ಕೊಟ್ಟಿವೆ. ಕೆಲವರು ಜನರನ್ನು ದಾರಿ ತಪ್ಪಿಸಿ 50:50 ಅನುಪಾತದ ಸೈಟ್ಗಳನ್ನ ಮಾರುತ್ತಿದ್ದಾರೆ. 50:50 ಅನುಪಾತದ ಸೈಟ್ಗಳ ಮಾರಾಟ ಆಗುವುದನ್ನು ನಿಲ್ಲಿಸಬೇಕು. ಡಾ. ಯತೀಂದ್ರ ಸಿದ್ದರಾಮಯ್ಯ 50:50 ಅನುಪಾತದ ಎಲ್ಲಾ ಸೈಟ್ ರದ್ದತಿಗೆ ಆದೇಶ ಮಾಡಬೇಕು. ಇಲ್ಲದಿದ್ದಲ್ಲಿ ಮುಡಾ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಲೋಕಾಯುಕ್ತದವರು ಐಪಿಎಸ್, ಐಎಎಸ್ ಅಧಿಕಾರಿಗಳ ಮನೆ ಮೇಲೆ ಯಾಕೆ ದಾಳಿ ಮಾಡ್ತಿಲ್ಲ? ಐಪಿಎಸ್, ಐಎಎಸ್ನಲ್ಲಿ ಭ್ರಷ್ಟರೇ ಇಲ್ವಾ? ಅವರು ಲಂಚವೇ ಪಡೆದಿಲ್ವ? ಲೋಕಾಯುಕ್ತ ಕಾನೂನಿನಿಂದ ಐಪಿಎಸ್, ಐಎಎಸ್ ಅಧಿಕಾರಿಗಳು ಹೊರಗಿದ್ದಾರಾ? ಭ್ರಷ್ಟರು ಅಂದ್ಮೇಲೆ ಎಲ್ಲಾ ಇಲಾಖೆಯಲ್ಲೂ ಇರ್ತಾರೆ. ಲೋಕಾಯುಕ್ತದವರು ಐಎಎಸ್, ಐಪಿಎಸ್ ಬಿಟ್ಟು ಬೇರೆಯವರ ಮನೆ ಮೇಲೆ ಯಾಕೆ ದಾಳಿ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
Laxmi News 24×7