ಬಂಗಾರಪೇಟೆ, ಫೆ.4- ದೇಶದಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ಬೆಂಬಲ ನೀಡುತ್ತಿಲ್ಲ. ಬಿಜೆಪಿ ಎಂಪಿಗಳಿಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡುವ ಧಮ್ ಇಲ್ಲ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಟೀಕಿಸಿದರು. ಕಾಮಸಮುದ್ರಂನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗಂಗಮ್ಮ ದೇವಸ್ಥಾನಕ್ಕೆ ಭೇಟಿ ನೀಡುವ ಮುಂಚೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಕೇಂದ್ರ ಬಡ್ಜೆಟ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಬಿಜೆಪಿ ಸದಸ್ಯರ ವಿರುದ್ದ ಅಸಮಧಾನ ಹೊರಹಾಕಿದರು.
ರಾಜ್ಯದಲ್ಲಿ 25 ಅಭ್ಯರ್ಥಿಗಳನ್ನು ಪಾರ್ಲಿಮೆಂಟ್ಗೆ ಜನತೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಈ ಎಲ್ಲಾ ಬಿಜೆಪಿ ಎಂಪಿಗಳು ನೀರಿನಲ್ಲಿ ಹೋಮ ಆದಂತೆ ಆಗಿದ್ದಾರೆ. 25 ಜನ ಎಂಪಿಗಳಿಂದ ನಮ್ಮ ರಾಜ್ಯಕ್ಕೆ ಯಾವುದೆ ನ್ಯಾಯಸಿಗುವುದಿಲ್ಲ. ಕೆಲಸ ಮಾಡೋ ಸರ್ಕಾರವಿಲ್ಲ. ಇನ್ನು ರಾಜ್ಯದಲ್ಲಿ ಮೂವರು ಕೇಂದ್ರ ಸಚಿವರು ಇದ್ದಾರೆ.ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ 45 ವರ್ಷದಲ್ಲಿ ಅತಿ ಹೆಚ್ಚು ನಿರುದ್ಯೋಗದಲ್ಲಿದ್ದಾರೆ.
ಬಿಜೆಪಿ ಸರ್ಕಾರ ಬಂದ ನಂತರ ನೋಟು ಅಮಾನೀಕರಣ, ಜಿಎಸ್ಟಿ ಮುಂತಾದ ಯೋಜನೆಗಳ ಜಾರಿಯಿಂದ ವ್ಯಾಪಾರ ವಹಿವಾಟಿಗೆ ತೊಂದರೆ ಆಗುತ್ತಿದೆ. ಅಭಿವೃದ್ದಿಯನ್ನು ಹೆಚ್ಚು ನಿರೀಕ್ಷೆ ಮಾಡಲು ಆಗೋದಿಲ್ಲ. ಕೇಂದ್ರ ಹಾಗು ರಾಜ್ಯ ಸರ್ಕಾರ ಜನತೆ ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ಹುಸಿ ಮಾಡುತ್ತಿದೆ ಎಂದು ಹೇಳಿದರು. ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದೆ.ಮೂರು ವರ್ಷ ಈ ಸರ್ಕಾರ ಇರಬೇಕು. ಜನಪರ ಕೆಲಸ ಮಾಡೋ ಸರ್ಕಾರ ಅಲ್ಲ.ಭಾವನೆಗಳ ಮುಖಾಂತರ ಬೇರೆ ಬೇರೆ ವಿಚಾರಗಳನ್ನು ಕೆದಕಿ ರಾಜಕಾರಣ ಮಾಡುವ ಸರ್ಕಾರ ಆಗಿದೆ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯರು ಅಡ್ಡಗಾಲು ಹಾಕುತ್ತಿದ್ದಾರ ಎಂದು ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮೊದಲಿನಿಂದಲೂ ದೆಹಲಿಯಲ್ಲಿ ನಾನು ಅಷ್ಟಾಗಿ ಸಂಪರ್ಕ ಮಾಡಿಕೊಂಡಿಲ್ಲ.ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಕಾಂಗೈ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಜಿಪಂ ಸದಸ್ಯ ನಾರಾಯಣರೆಡ್ಡಿ, ಮಾಜಿ ಎಪಿಎಂಸಿ ಅಧ್ಯಕ್ಷ ಚಂಗಾರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಕೆ.ನರಾಯಣಸ್ವಾಮಿ, ಉಪಾಧ್ಯಕ್ಷ ಶಶಿಧರ್ರೆಡ್ಡಿ, ಪುರಸಭೆ ಸಸದಸ್ಯ ವಸಂತ್ರೆಡ್ಡಿ, ಕಪಾಲಿ ಶಂಕರ್, ರೆಡ್ಡಿ ಸಂಘದ ಅಧ್ಯಕ್ಷ ವಿಜಯರಾಘವರೆಡ್ಡಿ, ಪತ್ರಕರ್ತ ವಿ.ಶಿವಾರೆಡ್ಡಿ , ಕರವೇ ಚಲಪತಿ ಮತ್ತಿತ್ತರರು ಇದ್ದರು.